ಬಚ್ಚಿಟ್ಟ ಹೃದೆಯ-ತೆರೆದಿಟ್ಟ ಮನಸ್ಸು.

Sunday, November 4, 2012



ಗೆದ್ದಲು ಹುಳಗಳು
------------------------


ಪವರನೆಂಬ ದುರಹಂಕಾರಿಯ  ನಿರ್ಧಾರ 
ಹಸಿದೊಟ್ಟೆಗಳ ಮೇಲಿನ ಪ್ರಹಾರವಾಯ್ತು.
ದವಸ ಧಾನ್ಯಗಳ ತಿಂದುಂಡ ಹೆಗ್ಗಣಗಳು ದುಂಡಗಾದವು,
ಲೆಕ್ಕಕ್ಕೆ ಸಿಗದ ದವಸ ಮಣ್ಣಾಯ್ತು.
ಪಶ್ಚಾತಾಪದ ಕುರುಹು ಇವನಿಗಿಲ್ಲವಾಯ್ತು.

ತರಂಗಾಂತರಂಗ ಹೊಕ್ಕ ಕೀರೀಟವಿಲ್ಲದ ರಾಜ
ಒಂದೇ ಕಿಕ್ಕಿಗೆ ಭೋಜನವುಂಡ ಕವಿಯತ್ರಿ
ದುರಾಸೆ ಮುಂದಾಗಿ ಜೈಲುಪಾಲಾದರು.

ಕ್ರೀಡೆಗೂ ಗ್ರಹಣ ಬಡಿಸುವ ಕಲೆಗಾರ ಕಲ್ಮಾಡಿ
ಅಂಡೊರೆಸುವ
ಕಾಗದಕ್ಕೂ
ಕೋಟಿ ಕೋಟಿ ಬಾಚಿದ್ದು ಇವನ ಜೀವಮಾನ ಸಾಧನೆ
ಬಿಡುಗಡೆಯಾದಮೇಲೆ ಕೊಂಡಾಡಿದ್ದು ಆ ಪಕ್ಷದ ಮಹತ್ಸಾದನೆ.

ಸಿಂಗ್ ಕಿಂಗ್ ಆದಿಯಾಗಿ ಕಲ್ಲಿದ್ದಲ ಕಪ್ಪಲ್ಲಿ ಮುಖತೊಳೆದು

ಏನು ಆಗಿಲ್ಲವೆಂದು ತಿಪ್ಪೆಸಾರಿಸಿ, ಕನ್ನಡಿ ಹಿಂದೆ ನಿಂತುಬಿಟ್ಟವರು
ಮೂರು ಬಿಟ್ಟದ್ದು ಎಲ್ಲರಿಗು ತಿಳಿದಿಲ್ಲವೆಂದು ಮುಸಿ ಮುಸಿ ನಕ್ಕಿದ್ದು
ಕಾಂಗ್ರೇಸ್ ಗಿಡದಷ್ಟೇ ಸತ್ಯ. 

ಗಡಾರಿ ಹಿಡಿದ ಗಡ್ಕರಿ
ಪ್ರಹಾರ ಮಾಡಿದ್ದು ಯಾವ ಪರಿ
ಆಳುವವನ ಹಿಡಿದು ಉಳುವವನ
ಹೆಡೆಮುರಿ ಕಟ್ಟಿ ಆದನು ಸಿರಿ-
ವಂತ.  ಇಂಗು ತಿಂದ ನಿ-ತಿನ್
ಮಂಗನಂತಾದವರು ಸ್ವಯಂ ಸೇವಕರು. 

ರಾಷ್ಟದಳಿಯ ಮನೆತೊಳಿಯ
ಅವನೊಬ್ಬ ವಾದ್ರಾ..,
ಕೆಲಸ  ಸೊನ್ನೆ.  ಅರ್ಹತೆ ಪ್ರಿಯಳ ಅಂಕ
ಅತ್ತೆಯ ನೆರಳು.  ಡಿ ಎಲ್ ಎಪ್ ಇವಗೆ ಮರುಳು.
ಬಹುಪರಾಕ್ ಮಂದಿ ತಾರಿಸುತಿಹರು ತಿಪ್ಪೆ  

ರಾಷ್ಟ್ರಸೇವಕರಿಗೆಂದಿದ್ದ ಸೂರ
ಸೂರೆಗೊಂಡರನೇಕರು. ಲಜ್ಜೆಯಿಲ್ಲದ ಮಂದಿ
ಮಂಡಿಯೂರಿ ನೆಕ್ಕಿಹರು ಇಟಾಲಿಯನ್ನಿನ ಚಪ್ಪಲಿ. 
ಅಭಯ ಹಸ್ತ ದೊರಕಿ, ನಗುತಿಹರು ಪ್ರೇತದಂತೆ. 

ನೈಸಾಗಲಿಲ್ಲ  ರಸ್ತೆ.  ವೈನಾದರು ತಿಂದುಂಡವರೆಲ್ಲ.

ಕಣಿ ಹೇಳುವಂತೆ ಕಾಣ್ವ ಖೇಣಿ .
ಹರಳೆಣ್ಣೆ ಕುಡಿದಂತ ಗೌಡ.
ಸಿಡುಕು ಮೊರೆ ಸುಬ್ಬನೆಂಬ ಅಡ್ಡಾದಿಡ್ಡಿ
ವಿಗ್ಗಿನಡಿಯಲ್ಲಿ ಕೆಲಸ ಮುಗಿಸಿದ ಚತು-
ರ.  ಕರೆದರಡ್ಡಿಯಿಲ್ಲ ಇವ ಕುಟಿಲ ಕೃಷ್ಣಯ್ಯ.

ಕರುನಾಡ ಮುಷ್ಠಿಯಲಿಡಿದು
ಪುರಜನರ ಕಾಲಡಿಯಿಕ್ಕಿ 
ಮಣ್ಣನ್ನೇ ಹೊನ್ನಾಗಿಸಿ ಮೆರೆದು
ಗಾಲಿಯನೇರಿದ ಜನಾರ್ಧನನೀಗ
ಕಂಬಿಯ ಹಿಂದೆ ಕಂಬಿನಿ ನುಂಗುತ
ಹುಸಿನಗೆ ಬೀರುತಿಹನು. 

ಹುದ್ದೆಯ ಜಿದ್ದಿಗೆ ಬಿದ್ದು
ಟೊಂಕಕಟ್ಟಿ ದುಡಿದು
ಅಧಿಕಾರಕ್ಕೇರಿ, ದೋಚಿ-ಬಾಚಿ
ಕೊನೆಗಾಯ್ತು  ಯಡ್ಡಿಯ ಅವಸಾನ. 

Thursday, August 23, 2012

'' ಖಾಲಿ ಪುಟದ ಕವನ '' --------


ಖಾಲಿ ತಲೆ ಖಾಲಿ

ಇತ್ತೀಚಿನ ಖಯಾಲಿ,
ಬೆರಳಿಗಂಟಿದ ಶಾಯಿ
ಮೂಡಿಸದೆ ಅಕ್ಷರ
ಹಾಳೆ ಖಾಲಿ ಹಾಳೆ.

ಧೃತಿಗೆಡಲಿಲ್ಲ, ಗೀಚಿದೆ  

ತೋಚದೆ ಸುಮ್ಮನೆ;
ಭೀಷಣ ಪಾಷಾಣ
ಮೆತ್ತಿದ ಪಾಖಂಡಿ
ಮನಸುಗಳಲಿ
ಮಂದಿರ ಮಸೀದಿ
ಚರ್ಚ್ ಎಂಬ-
ನಡುಮನೆಯ ಅಪೀಮು,
ನೆತ್ತಿಗಡರಿ
ನರನಾಡಿಗಳೆಲ್ಲ ನಂಜಾದವು
ಕಣ್ಣು  ಕೆಂಪಾಗಿ
ರಕ್ತ ಕಪ್ಪಾಯಿತು,

ಭಾವ ಬಂಜೆಯಂತಾಗಿ

ಭ್ರಾಮಕ ಉಸಿರಾಗಿ
ಬಸಿರಾಗಲಿಲ್ಲ ಭ್ರಾತೃತ್ವ.
ಇನ್ನೆಲ್ಲಿ ಹೆರಿಗೆ ಬೇನೆ...!!

ಛೇ..! ಈ
ಗೊಡ್ಡು ಭ್ರಾಂತು
ಪಥ್ಯವಿಲ್ಲದ ರೋಗ.
ಇದೆಲ್ಲ..,
ಕಸದ ತೊಟ್ಟಿಯಲ್ಲಿ
ಗೊಬ್ಬರವಾಗುವ ವಿಷಯ.
ಯಾರಿಗೂ ಬೇಡದ
ಕಾಡದ ಸಂಗತಿ
ನನಗೇಕೆ ಬೇಕು...?
ಅರ್ಬುದ ರೋಗ
ಕಾಲಿನ ಬುಡದ ಸತ್ಯ
ನಿರ್ಲಕ್ಷಿಸಿದರೆ
ಆಪತ್ತು ಬಂದು ಚಾಪೆಯಲ್ಲಿ
ಸುತ್ತೊಯ್ವುದು, ಕೇಳದೆ..!

ಇಲ್ಲಾ...,  ಕವನವಾಗಲಿಲ್ಲ

ಪದಗಳ ಬೆಸುಗೆ
ಸರಿಹೋಗಲಿಲ್ಲ..,
ಬರೆದದ್ದನ್ನೆಲ್ಲ ಹರಿದು
ಮೊದಲಿಗೆ ಬಂದೆ
ಮತ್ತದೇ ಶೂನ್ಯ ....

ಖಾಲಿ ತಲೆ

ದೆವ್ವದ ನೆಲೆ,
ಈ ಸತ್ಯದ ಉಕ್ತಿಗೆ 
ಹೊಸತೊಂದು ಪುಟ
ಸೇರ್ಪಡೆ..!
ಇದುವೇ ನನ್ನ
ಖಾಲಿ ಪುಟದ ಕವನ...!!

Thursday, June 28, 2012

---- ಕಾಲಾಯ ತಸ್ಮೈ ನಮಃ ---



'' ಎಂಥಾ ಮಗು, ಗಂಡು ತಾನೆ '' .?!!
ಇಲ್ಲ .., ಹೆಣ್ಣು ಮಗು...!
ಛೇ., ಸಾಮ್ರಾಜ್ಯ ಪಥನದ ಮುನ್ಸೂಚನೆ..!
ಗೋಡೆ ಮೇಲಿನ ಗೌಳಿ ಲೋಚಗುಟ್ಟುತ್ತಿತ್ತು
ಆದರೇನಂತೆ,
ಮುಂದಾದವು....,
ತನ್ನ ಪೌರುಷದ ಮೇಲಿನ ನಂಬಿಕೆಗೆ,
ಒಂದಲ್ಲ ಎರಡು ಗಂಡು ಮಕ್ಕಳು.
ಬಿತ್ತನೆ ಬೀಜಗಳಂತೆ
ವಂಶಾವಾಹಿನಿಯ  ತಳಿಗಳವು
ದೊಡ್ಡವ ಅಪ್ಪನಿಗೆ; ಕಿರಿಯವ ಅವ್ವನಿಗೆ
ತಲೆ ಬೋಳಿಸಿಕೊಂಡು ಕೊಳ್ಳಿ ಹಿಡಿಯುವುದಕ್ಕೆ,
ಜೊತೆಗೊಂದಿಷ್ಟು ಪಿಂಡ ಹಾಕುವುದಕ್ಕೆ..,
ಸುತ್ತಿ ಬಳಸುವುದಿಲ್ಲ, ಸ್ವರ್ಗಕ್ಕೆ ನೇರದಾರಿ
ತೋರಿಸುವ ಕುಲೋದ್ಧಾರಕರು.
ಕೀರ್ತಿಪತಾಕೆ ಹಾರಿಸುವ ಕೀರ್ತಿವಂತರು.
ನೆಲ ಕಾಣುತಿದ್ದ ಗೌಡನ ಮೀಸೆ ಆಕಾಶ ನೋಡುತ್ತಿತ್ತು. 

ಅದೊಂದು ದಿನ....

ನನ್ನ ಅಸ್ಥಿಯ ಬೂದಿ-
ಯನ್ನು  ನದಿಯಲ್ಲಿ ವಿಸರ್ಜಿಸಿರೆಂದು
ಜೀರ್ಣಾವಸ್ಥೆಯಲ್ಲಿಯೇ ಕಣ್ಮುಚ್ಚಿದ ಅಪ್ಪ.
ಆಶ್ಚರ್ಯ..! ಸಗ್ಗದ ದಾರಿ ಮುಚ್ಚಿದೆ..!
ಇಲ್ಲೇಕೆ ಬಂದಿರಿ...... ಕಿಂಕರರ ಪ್ರಶ್ನೆ..?
ಮಣ್ಣಾದ ಮೇಲೆ ಮತ್ತೇನು ಕಿರಿಕಿರಿ
ಅಪ್ಪನ ಮರು ಪ್ರಶ್ನೆ.
ಮುಕ್ತಿ ಇಲ್ಲದವರಿಗೆಂದೇ  ಇದೇ
ತ್ರಿಶಂಕೂ ಸ್ವರ್ಗ, ಹೋಗೆಂಬ ಉತ್ತರ. 
ಅಯೋಮಯನಾದ ಅಪ್ಪಾ..
ತೊರೆದುಬಂದ ದೇಹದೆಡೆಗೆ ಮತ್ತೆ ಬಂದ. 
ಮುಡಿತುಂಬಾ ಹೂ ಮುಡಿದು, ಕೈತುಂಬಾ ಬಳೆ-
ತೊಟ್ಟ ಹೆಣ್ಣಿನ ಬತ್ತಿದ ಕಣ್ಣೀರ ಜೊತೆಗೆ
ಗೌಜು ಗದ್ದಲ ಏರುದನಿಗಳ  ಮೇಲಾಟ.
ನಡುವೆ.....,
ಅನಾಥವಾಗಿ ಬಿದ್ದಿರುವ ತನ್ನ ದೇಹ.
ಮತ್ತಷ್ಟು ಸನಿಹಕ್ಕೆ ಸರಿದು ಬಂದ
ಸಮಭಾಗ ಸಿಗುವವರೆಗೂ ಹೆಣ ಸುಡಲು
ಬಿಡನೆಂಬ ಮಗನೊಬ್ಬ,
ಮರಣಶಾಸನವಿದೆ ಬೇಕಾದ್ದು ಮಾಡಿಕೊ
ಎನ್ನುವ ಮತ್ತೊಬ್ಬ.  ಹರಿಶಿಣ-
ಕುಂಕುಮಕ್ಕೆ ನನಗೆಲ್ಲಿದೆ ಎಂಬ ಮಗಳು. 
ಇದನ್ನೆಲ್ಲಾ ನೋಡಿದ ಅಪ್ಪ,  ಬಂದಷ್ಟೇ
ವೇಗವಾಗಿ ಹಿಂದಿರುಗಿ  ಹೊರಟ,
ಇವರನ್ನು ಹೆತ್ತ ತಪ್ಪಿಗೆ
ನರಕದ ಬಾಗಿಲಾದರು  ತೆರೆದಿರಬಹುದೆಂಬ
ಆಶಾಭಾವನೆಯಿಂದ...!!

Saturday, June 16, 2012

------ಋತುಮಾನ -------




ಮೊಗ್ಗು ಮೈನೆರೆದಾಗಿನ 
ಬದಲಾದ  ಮೈಯ ಬಿಸುಪು, 
ಮಾದಕತೆ ಮೈತಾಕಿ, 
ಕುತೂಹಲವಾಯ್ತು ಇಮ್ಮಡಿ.
ವಿಸ್ಮಯವಿಲ್ಲಿ ವಿಹಿತ,
ಅದು ಬರೀ ಬೆರಗಲ್ಲ.!
ಅಡಿಯಿಂದ ಮುಡಿಯವರೆಗಿನ ಅಚ್ಚರಿ.!! 
ಅಂಕು ಡೊಂಕಿನ ದಾರಿ
ಇಕ್ಕೆಲಗಳಲ್ಲಿ ಹಸಿರು ತುಂಬಿ, 
ಮಾಘದಲ್ಲಿ  ತೂಗಿ  ಬಾಗೋ   
ವಯ್ಯಾರದ ಪ್ರಕೃತಿ ಸೊಬಗ,
ಉಬ್ಬು ತಗ್ಗುಗಳ ಕಣಿವೆಯಲ್ಲಿ 

ಕಳೆದುಹೋದ ಕ್ಷಣದಲಿ, 
ಸ್ತಂಭಿಸಿದ ಬೀಸು ಗಾಳಿಯ 
ನಡುವೆ,  ಸೌಸವದ ಬೆವರು.!
ಘನೀಭವಿಸಿದ ಮೋಡ.
ಹನಿಯಾಗಿ ಸ್ಖಲಿಸುವ ಮುಂಚಿ-
ನಲಿ, ಗುಡುಗು ಮಿಂಚಿನಾರ್ಭಟ
ಸೋನೆ ಮಳೆಗೆ
ಮನ ತಣಿದ  ಇಳೆಯಂತೆ.
ಸ್ವಾದದ ಅನುಭೂತಿ 
ಸಂತೃಪ್ತಿಯ,  ಬೆನ್ನಿಗಂಟಿದ 
ಸೃಷ್ಟಿಯ ರಹಸ್ಯ.!  
ಪ್ರಕೃತಿಯ ಸಮ್ಮಿಲನದಿ   
ಬೆತ್ತಲು ಬಯಲು,
ಹೊಸ ದೃಷ್ಟಿಯ ಉಗಮ.  

Monday, May 28, 2012

-- '' ನನ್ನೀ ಪ್ರಣತಿ '' --

ಈ ಸಂಜೆಗತ್ತಲ  ತಂಪಿಂದು
ಸುಡುಕೆಂಡ  ಈ ಹೃದಯಕೆ,
ತೆರೆಸರಿಸಿ ಹೊರಚಾಚಿ
ಸಿಹಿನೆನಕೆ ಕಣ್ಣೀರಂತೆ ಒಸರಿ
ಜಿಗುಟಾಯ್ತು ಭಾವ.

ಹಿಡಿಯಷ್ಟು ಪ್ರೀತಿ
ಹೊರಲಾರದಷ್ಟು ಭಾರ
ಪಿಸುಮಾತಿನ ಲಹರಿ
ಬಿಸಿಯುಸಿರಲು ತಂಪೆನಿಸುವ ಪದೆಪು,
ಪ್ರಮೋದದಿ ಇದೋ ನನ್ನೀ ಪ್ರಣತಿ.

ಬಚ್ಚಿಟ್ಟ ಬಯಕೆಯ ಕಾಮವಲ್ಲ
ಬೆಚ್ಚನೆಯ ಹೊದಿಕೆಯಲಿ
ಮಡಿಚಿಟ್ಟ ಪ್ರೇಮ ನಮ್ಮದು
ಅವಳ ಕಣ್ಣೊಳಗಿನ ಬಿಂಬ ನಾನು 
ಮರೆತು ಕಣ್ಣ ಹನಿ ಜಾರಿಸಲವಳು.

ಕಾಯುವೆನು.....,
ಕಾಯುತಲೇ ಕಾಲನ 
ಅಪ್ಪಿದರು ಸರಿಯೇ....,
ಒಪ್ಪಿಸಿಕೊಂಡ ಹೃದಯವನು 
ಮತ್ತೆ ಕೇಳನೆಂದು...!!

ಹಳೆ ನೆನಪಿನ 
ಹೊಸ ಭಾಷ್ಯ 
ಬರೆದಿಡುವೆ ನಲ್ಲೆಗಾಗಿ 
ಮುಂದೊಂದು ದಿನ 
ಹೊರಬರಲಿ   ಕವಿತೆಯಾಗಿ...!!

Thursday, May 24, 2012

'' ಪ್ರತೀಕ್ಷೆ ''


ಯಮುನೆ ಹರಿಯುತಿದ್ದಾಳೆ 
ನಿಶ್ಯಬ್ದವಾಗಿ, 
ಬಳುಕಿ  ಹರಿಯುವ ಲಾಸ್ಯವಿಲ್ಲ...,
ಕಲರವ ಕೊರಗಾಗಿದೆ.

ದಡದ ಮೇಲಿನ ಕದಂಬ ಮರ 
ಕದಲದೆ ನಿಂತಿದೆ, 
ಸೂಸದೆ ಪರಿಮಳವ 
ಮೋಹನ ಕೊಟ್ಟ ಮಾತಿಗೆ ಸಾಕ್ಷಿಯಾಗಿ,


ಬೆಳದಿಂಗಳು ಮಂಕಾಗಿದೆ 
ಬೇಗೆಯಿಂದ, 
ರಾಧೆಯ ಹೃದಯದಿ ಅರಳಿದ  ಪ್ರೀತಿಗೆ
ಕಾರಣ ನಾನಾದೆನೆಂದು....!  

ಹಣತೆ ಹಚ್ಚಿಟ್ಟು ಕಾಯುತಿಹಳು ರಾಧೆ
ಮೋಹನನಿಗಾಗಿ, 
ಕಣ್ಣೀರ ಹನಿ ಹೊಳೆಯಾಗಿ ಹರಿಸಿ 
ವಿರಹದಿಂದ....,

ಅದೆಷ್ಟೋ ಹುಣ್ಣಿಮೆ ಬಂದವು 
ಕರಗಿ ಹೋದವು ಕಾರಿರುಳಲ್ಲಿ 
ಮುರಳಿ ಮೋಹನ ಮಾತುಕೊಟ್ಟಿದ್ದಾನೆ
 '' ಬಂದೇ ಬರುತ್ತೇನೆಂದು ''
ಯಾರಾದರು ಕಂಡಿರ, ಗೋಪಾಲನ....?
ರಾಧೆ ಈಗಲೂ ಕಾಯುತಿಹಳು 
ನೋಡಿರಲ್ಲಿ....,  ಕದಂಬದ ಮರಕ್ಕೊರಗಿ  ಕುಳಿತಿಹಳು.....!!

Tuesday, May 22, 2012

ಮೇಘ ಸಂದೇಶ......


ದೂರ ದೂರಕೆ ತೇಲಿ ಸಾಗುತಿರುವ ಮೋಡಗಳೇ....,
ನನ್ನ ವಿನಂತಿಯನ್ನೊಮ್ಮೆ ಆಲಿಸಿ ಮುಂದೆ ಸಾಗಲಾರಿರ....?
ತಡೆದು ನಿಲ್ಲಿಸಿದ್ದಕ್ಕೆ ಕ್ಷಮೆಯಿರಲಿ.....,

ನನ್ನವಳು, 
ಬಾನಲ್ಲಿ ಹೊಳೆವ ನಕ್ಷತ್ರವಾಗಿದ್ದಳು 
ಅದೇಕೊ...! ಈ ನಡುವೆ ಮಿನುಗಲು ಮರೆತಂತಿಹಳು 
ಕರಿಮುಗಿಲಲ್ಲಿ  ಮಿಂಚುವ ಮಿಸುನಿಯಂತಿದ್ದಳು 
ಆದರೀಗ  ಕನಸಿಗೂ ಬರಲಾರದಷ್ಟು ಬದಲಾಗಿಹಳು 

ಈ ನನ್ನ ಮನಸನ್ನು ಮರೆತು ಇರುಳಲ್ಲಿ  ಕಳೆ-
ದು ಹೋದ ಬೆಳದಿಂಗಳ ಬಾಲೆ...., ಅವಳು...!
ನನ್ನೀ ದೇಹವೆಂಬ ಕೊರಡು ಇಲ್ಲಿದೆ 
ಹೃದಯ ಮಾತ್ರ ಅವಳಲ್ಲಿದೆ...! 
ಇನ್ನು ಕಾಯುವ ತಾಳ್ಮೆ  ನನಗಿಲ್ಲ...,

ನೀವು ಸಾಗುವ ಹಾದಿಯಲ್ಲಿ ನನ್ನ 
ತಾರೆಯನ್ನೇನಾದರು ಕಂಡರೆ...
ಕನಿಕರಿಸಿ ಅರುಹಿಬಿಡಿ,
'' ಅಲ್ಲಿ ಕನಸೊಂದು ಕಾಯುತಿದೆ ನಿನಗಾಗಿ 
  ನೀ ಇನ್ನೂ   ಕಾಣದಾದರೆ ಅವನ ಸಾವು ನಿನಗಾಗಿ '' 
ಎನ್ನುತ ಮುಂದೆ ಸಾಗಿ ಹೋಗಿ ಬಂಧುಗಳೇ.....