ಬಚ್ಚಿಟ್ಟ ಹೃದೆಯ-ತೆರೆದಿಟ್ಟ ಮನಸ್ಸು.

Saturday, February 11, 2012

ಕುರಿ ಮತ್ತು ನಾನು


                    ಮನೆಯ ಕಾಂಪೌಂಡ್ ಇಷ್ಟೊಂದು ದೊಡ್ಡದಾಗಿದೆ.  ಒಂದು ಚಿಕ್ಕ ಕುರಿಮರಿ ತನ್ನಿ ಸಾಕೋಣ.    ಸುತ್ತಾ ಮುತ್ತಾ ಇರುವ ಹುಲ್ಲನ್ನು ತಿಂದುಕೊಂಡು ಬೆಳೆಯುತ್ತೆ.    ಮೇಯಿಸಲು ಹೊರಗಡೆ ಹೋಗುವ ಅವಶ್ಯಕತೆಯಿರುವುದಿಲ್ಲ.  ನನಗು ಮನೆಯಲ್ಲಿ ಸುಮ್ಮನೆ ಕೂತು ಕಾಲ ಕಳೆಯುವುದು ತಪ್ಪುತ್ತದೆ ಎಂಬ ಅಮ್ಮನ ಮಾತಿಗೆ ಬೆಲೆ ಕೊಟ್ಟು ಅಪ್ಪಾ ಒಂದು ಸಣ್ಣನೆಯ ಕುರಿಮರಿಯನ್ನು ಮಾರನೆಯ ದಿನವೇ ತಂದರು.   


ನಾನು ಶಾಲೆಯಲ್ಲಿ ಕುಳಿತಿದ್ದರು ಕುರಿಮರಿಯದೆ ಧ್ಯಾನ.  ಬೆಲ್ಲು ಎಷ್ಟು ಬೇಗ  ಹೊಡೆಯುವುದೋ ಎಂಬ ನಿರೀಕ್ಷೆಯಲ್ಲಿ ಮೇಷ್ಟ್ರು ಹೇಳಿಕೊಟ್ಟ ಪಾಠ ತಲೆಗೆ ಸೇರುತ್ತಿರಲಿಲ್ಲ.  ಶಾಲೆ ಬಿಟ್ಟ ತಕ್ಷಣ ಓಡುವುದಕ್ಕೆ    ಶುರುಮಾಡಿದರೆ  ಮನೆಯ ಬಳಿ ಬಂದಾಗಲೇ ನನ್ನ  ಕಾಲಿಗೆ ಬ್ರೇಕ್ ಬೀಳುತಿದ್ದುದ್ದು.   ಕುರಿಮರಿಯನ್ನು ಒಮ್ಮೆ ಮುದ್ದಾಡಿ,    ಅದರ ಪಿಳಿ ಪಿಳಿ ಕಣ್ಣುಗಳನ್ನು ನೋಡುತ್ತಾ ಮತ್ತೊಮ್ಮೆ ಅದರ ಮೈದಡವಿದರೆ ಸಾಕು,  ಕುರಿಮರಿ ಚಂಗನೆ  ಮೇಲಕ್ಕೆಗರಿ ಸುತ್ತಲು ಕುಣಿದು ಕುಪ್ಪಳಿಸುತಿತ್ತು.   ನನ್ನಷ್ಟೇ ಆಸಕ್ತಿಯಿಂದ ಕುರಿಮರಿಯ ಬಾಲಲೀಲೆಯನ್ನು ನೋಡಲು ಕಣ್ಣರಳಿಸಿಕೊಂಡು ಬರುತ್ತಿದ್ದಳು ನನ್ನ ಚಿಕ್ಕ ಮುದ್ದು ತಂಗಿ.  ಹೀಗೊಂದು ದಿನ ಕಾಣದ ಹಾಗೆ ಅಪ್ಪನ ಜೇಬಿನಿಂದ ಕದ್ದ ಕಾಸಿನಿಂದ ಒಂದು ಚಿಕ್ಕ ಗಂಟೆಯನ್ನು ಕೊಂಡು ತಂದು  ಕುರಿಮರಿಯ ಕೊರಳಿಗೆ ಕಟ್ಟಿದೆ.  ಅದು ಚಂಗನೆ ನೆಗೆದಾಗ ಹೊಮ್ಮುತಿದ್ದ ಗಂಟೆಯ ಕಿಣಿ ಕಿಣಿ ಶಬ್ದ  ಕೇಳಿದಾಗ  ಎಂತಹುದೋ ಸಾರ್ಥಕ ಭಾವ ನನ್ನ ಮನದಲ್ಲಿ.


ಕ್ರಮೇಣ ಸ್ನೇಹಿತರ ಜೊತೆ ಆಟವಾಡುವುದನ್ನು ಬಿಟ್ಟು  ಕುರಿಮರಿಯ ಜೊತೆಯಲ್ಲಿಯೇ ನನ್ನ ಆಟವನ್ನು ಶುರುವಿಟ್ಟುಕೊಳ್ಳುತಿದ್ದೆ.    ದಿನಕಳೆದಂತೆ ಕುರಿಮರಿ ನನಗೆ ಹೊಂದಿಕೊಂಡು ಬಿಟ್ಟಿತೋ, ನಾನೇ ಅದಕ್ಕೆ ಹೊಂದಿಕೊಂಡು ಬಿಟ್ಟೆನೋ ಗೊತ್ತಿಲ್ಲ.   ನಾನು ಮನೆಯಿಂದ  ಹೊರಗಡೆ ಎಲ್ಲೇ ಹೋದರು ಹಿಂದಿಂದೆಯೇ ಬರುತ್ತಿತ್ತು.    ಶಾಲೆಗೇ ಹೋಗಬೇಕಾದರೆ ಅದನ್ನು ಅಗ್ಗದಿಂದ ಕಟ್ಟಿ ಹಾಕಿ ಬರಬೇಕಾಗಿತ್ತು.   ಇಲ್ಲವಾದರೆ ಶಾಲೆಯ ತನಕ ನನ್ನ ಹಿಂದೆಯೇ ಬಂದು ಬಿಡುತ್ತಿತ್ತು.   ಕೊನೆ ಕೊನೆಗೆ ನನಗೆ ಕುರಿಮರಿ ಎಷ್ಟು  ಇಷ್ಟವಾಗಿ ಹೋಯ್ತು ಎಂದರೆ,   ಅದು ಕೂಡ ನನ್ನ ಪಕ್ಕದಲ್ಲಿಯೇ ಚಾಪೆಯ ಮೇಲೆ ಮಲಗಬೇಕೆಂದು ಅಪ್ಪನ ಹತ್ತಿರ ಜಗಳವಾಡಿ ಮಲಗಿಸಿಕೊಂಡಿದ್ದೆ.    ಆದರೆ ನನ್ನ ಕುರಿಮರಿಯ ಒಂದು ಕೆಟ್ಟ ಅಭ್ಯಾಸ  ಎಂದರೆ ಯಾವಾಗ ಎಂದರೆ ಆವಾಗ ಪಿಕ್ಕೆ ಹಾಕಿ,  ಹುಚ್ಚೆ ಹುಯ್ದು ಬಿಡುತ್ತಿತ್ತು.    ಅದರಿಂದಾಗಿ ನಾನು ಹೊದ್ದುಕೊಳ್ಳುವ ಬೆಡ್ ಶೀಟ್ ಕೂಡ ಚುಂಗು ಚುಂಗು ವಾಸನೆ ಬರುವುದಕ್ಕೆ    ಶುರುವಾಗಿ ಮೈಮೇಲೆ ಹಾಕಿಕೊಳ್ಳುವುದಕ್ಕೆ ಬೇಸರವಾಗುತ್ತಿತ್ತು.    ಕುರಿಪಿಕ್ಕೆಗಳೆಲ್ಲ ನನ್ನ ಬೆಡ್ ಶೀಟ್ಗೆ ಅಂಟಿಕೊಂಡು ಬಿಡುತಿದ್ದವು.    ಅಮ್ಮ ದಿನವು ಬಯ್ಯುತ್ತಾ ನಾನು ಹಾಸಿ ಹೊದ್ದುಕೊಳ್ಳುವ ಬಟ್ಟೆಗಳನ್ನು ಹೊಗೆಯಲಿಕ್ಕೆ ಹಾಕುತಿದ್ದರು.   ಆಮೇಲೆ ನನಗೆ ಸಾಕಷ್ಟು ಬುದ್ಧಿವಾದವನ್ನು ಹೇಳಿ ಪಕ್ಕದ ಶೆಡ್ಡಿನಲ್ಲಿ ಅದಕ್ಕೆ ಮಲಗಲು ವ್ಯವಸ್ಥೆ ಮಾಡಿದ್ದರು.


ದಿನ  ಕಳೆದಂತೆ ಕುರಿಮರಿ  ದಷ್ಟಪುಷ್ಟವಾಗತೊಡಗಿತು.   ಆಮೇಲಾಮೇಲೆ  ಏಕೋ ಕಾಣೆ ನನ್ನ ಮಾತಿಗೆ ಸರಿಯಾಗಿ  ಮಾರ್ಯಾದೆಯನ್ನೇ ಕೊಡುತ್ತಿರಲಿಲ್ಲ.  ನನ್ನ ಮಾತೆ ಕೇಳುತ್ತಿರಲಿಲ್ಲ.  ತಿನ್ನುವುದೇ ಅದರ ಹವ್ಯಾಸವಾಗಿ ಹೋಗಿತ್ತು.   ಆದರೂ ಆಗೊಮ್ಮೆ ಹೀಗೊಮ್ಮೆ   ಬಂದು ತನ್ನ ಮುಖವನ್ನು ನನ್ನ ಕಾಲಿಗೆ ತಿಕ್ಕುತ್ತಾ ನಿಲ್ಲುತ್ತಿತ್ತು.    ಹೀಗೆ ಒಂದು ವರ್ಷ ಅದು ಹೇಗೋ ಕಳೆದು ಹೋಯಿತು.   ನಮ್ಮ  ಮನೆಯ ಹಿಂದೆ ಇದ್ದ  ಸಾಬಣ್ಣ ಆಗಾಗ ನಮ್ಮ ಕುರಿಯನ್ನೇ ದಿಟ್ಟಿಸಿ ನೋಡಿ,  ಮನಸಲ್ಲೇ ಏನೇನೋ ಲೆಕ್ಕ ಹಾಕುತ್ತಾ ಒಂದು  ನಿಮಿಷ ನಿಂತಿದ್ದು,  ತನ್ನ ಹಳೇ ಸೈಕಲ್ಲನ್ನು ಹತ್ತಿಕೊಂಡು ಹೋಗುತ್ತಿದ್ದ.  ಹೀಗೆಯೇ ಮತ್ತೆ ಕೆಲ ದಿನಗಳು ಉರುಳಿ ಹೋದವು.   ನಾನು ಮಾಮೂಲಿನಂತೆ ಶಾಲೆಯಿಂದ ಬಂದ ತಕ್ಷಣ ಕುರಿ ಮರಿಯ ಯೋಗಕ್ಷೇಮದ ಕಡೆ ನನ್ನ ಗಮನವನ್ನು ನೀಡುತ್ತಿದ್ದೆ.   ಸ್ವಲ್ಪ ಅದರ ಮೈ ಗಲೀಜು ಕಂಡರೂ ಅದಕ್ಕೆ ಸ್ನಾನ ಮಾಡಿಸಲೇಬೇಕು ನಾನು.  ಆ ವಿಷಯದಲ್ಲಿ ನಮ್ಮ ಕುರಿಮರಿ ನಾನು ಹೇಳಿದಂತೆ ಕೇಳುತಿತ್ತು.


ಆ ದಿನವಂತೂ,   ಸಾಬಣ್ಣ  ಯಾವುದೋ ನಿರ್ಧಾರಕ್ಕೆ ಬಂದವನಂತೆ  ನಮ್ಮ ಕುರಿಮರಿಯ ಬಳಿಗೆ ಬಂದು ಅದರ ತೂಕ ಅಳತೆ ಮಾಡುವವನಂತೆ ಅದನ್ನು ಮುಟ್ಟಿ ಮುಟ್ಟಿ ನೋಡುತ್ತಾ ಏನನ್ನೋ ಲೆಕ್ಕಾಚಾರ ಹಾಕುತಿದ್ದನು.  ನಾನು ಅದೇ ತಾನೆ ಶಾಲೆಯಿಂದ ಬಂದೆ  ” ಮರಿ ನಿಮ್ಮದು  ಅಪ್ಪಾ ಇನ್ನು ಬಂದಿಲ್ಲಾ ” ಎಂದೂ ಕೇಳಿದ.   ನಾನು, ”  ಇಲ್ಲಾ, ಸಂಜೆ ಆರು ಗಂಟೆಯ ಮೇಲೆ ಬರುತ್ತಾರೆ”  ಎಂದೂ ಹೇಳಿದೆ.    ಆಗ ಅಮ್ಮ ಪಾತ್ರೆ ತೊಳೆಯುತ್ತಾ ಬಚ್ಚಲು ಮನೆಯಲ್ಲಿದ್ದಳು.   ಸರಿ ಬಿಡು ಮಗ ಬೆಳಿಗ್ಗೇನೆ ಬರ್ತೀನಿ ಎಂದೂ ಹೇಳಿ ಹೊರಟು ಹೋದನು.   ಯಾವತ್ತು ಇಲ್ಲದವನು,    ಇವನ್ಯಾಕೆ ನಮ್ಮ ಅಪ್ಪನನ್ನು ಕೇಳಿದ  ಎಂದೂ ಯೋಚಿಸುತ್ತಾ  ಮನೆಯೊಳಗೇ ಹೋದೆ.


ಮಾರನೆಯ ದಿನ ಭಾನುವಾರ.   ಹೇಗಿದ್ದರೂ ಈ ದಿನ ಶಾಲೆಗೆ  ರಜಾ.   ಇನ್ನೊಂದಿಷ್ಟು ನಿದ್ದೆ ಮಾಡುವ ಎಂದೂ ಬೆಚ್ಚಗೆ ಕಂಬಳಿಯನ್ನು ಹೊದ್ದು ಮಲಗಿದ್ದೆ.   ನಮ್ಮ ಕುರಿ  ಮ್ಯಾ ಮ್ಯಾ  ಎಂದೂ ಇದ್ದಕ್ಕಿದ್ದಂತೆ ಅರಚುತ್ತಿರುವುದು ಕೇಳಿಸಿತು.     ನಾನು ಇನ್ನು ಅದರ ಹತ್ತಿರ ಬಂದಿಲ್ಲ ಎಂದೂ ಕಿರುಚುತ್ತಿರಬಹುದು  ಎಂದುಕೊಂಡು,   ಆಮೇಲೆ ಹೋಗಿ ಅದರ ಕ್ಷೇಮ ವಿಚಾರಿಸಿದರಾಯ್ತು  ಎಂದು  ಹಾಗೆಯೇ ಮಲಗಿದ್ದೆ.   ಕ್ರಮೇಣ ಅದರ ದನಿ ಕೇಳದಂತಾಯಿತು.   ಹಾಗೆ ನಿದ್ದೆ ಹೋಗಿದ್ದೆ.   ಅಮ್ಮ ಬಂದು, ಗಂಟೆ ಒಂಭತ್ತಾಯಿತು  ಹೇಳು ಮೇಲಕ್ಕೆ ಎಂದು ಎಬ್ಬಿಸಿದಾಗಲೇ ಎಚ್ಚರವಾಗಿದ್ದು.  ಸರಿ ಮಾಮೂಲಿನಂತೆ ನಮ್ಮ ಕುರಿಯನ್ನು ನೋಡುವುದಕ್ಕೆ ಶೆಡ್ಡಿಗೆ ಹೋದೆ.  ಅದು ಅಲ್ಲಿರಲಿಲ್ಲ.  ಅಮ್ಮ ಮೇಯುವುದಕ್ಕೆ ಬಿಟ್ಟಿದ್ದಾಳೇನೋ ಎಂದು ಕಾಂಪೌಂಡ್ ಸುತ್ತ ಮುತ್ತೆಲ್ಲ ನೋಡಿದೆ.  ಕುರಿ ಕಾಣಿಸಲಿಲ್ಲ.  ಗಾಬರಿಯಿಂದ ಓಡಿ ಬಂದು ಅಮ್ಮನಿಗೆ ಕುರಿ ಕಾಣಿಸುತ್ತಿಲ್ಲವೆಂದು  ಹೇಳಿದೆ.    ” ಹಿಂದಿನ ಮನೆಯ ಸಾಬರು ಬೆಳಿಗ್ಗೇನೆ ಅದನ್ನು ನಿಮ್ಮ ಅಪ್ಪನ ಬಳಿ ವ್ಯಾಪಾರ ಮಾಡಿಕೊಂಡು ಎಳೆದುಕೊಂಡು ಹೋದ ಕಣೋ” ಎಂದರು.    ಅಮ್ಮ ಹಾಗೆಂದಾಕ್ಷಣ ನನಗೆ ಅಳು ತಡೆಯದಾಯಿತು.   ಅಳುತ್ತಲೇ  ” ಆ ಸಾಬರು ಅವತ್ತಿನಿಂದ ನಮ್ಮ ಕುರಿಯನ್ನೇ  ನೋಡುತ್ತಿದ್ದ.  ಅವನಿಗೆ ಏಕೆ ಕೊಟ್ಟಿರಿ ” ಎಂದು ಕೇಳಿದೆ.   ಅದಕ್ಕೆ ಅಮ್ಮ ” ಅವನು ಕುರಿಗಳನ್ನು ಕೊಂಡುಕೊಂಡು ಹೋಗಿ,   ಅವುಗಳನ್ನು ಕೊಯ್ದು  ವ್ಯಾಪಾರ ಮಾಡುತ್ತಾನೆ.    ಅದಕ್ಕೆ ನಮ್ಮ ಕುರಿಯನ್ನು ವ್ಯಾಪಾರ ಮಾಡಿಕೊಂಡು ಹೋದಾ ಕಣೋ”  ಎಂದರು.      ಆಗ ನಾನು ಸಿಟ್ಟಿನಿಂದ ಅಪ್ಪನ ಬಳಿ ಹೋಗಿ ” ನೀವು ಕುರಿಯನ್ನು ಅವನಿಗೆ ಏಕೆ ಮಾರಿದಿರಿ.     ಅವನು ಅದನ್ನು ಕೊಂದು ಬಿಡುತ್ತಾನೆ.   ನಡೀರಿ ಅದನ್ನು ವಾಪಸ್ಸು ತರೋಣ ” ಎಂದು ಹೇಳಿದೆ.  ಅದಕ್ಕೆ ಅಪ್ಪಾ ಸಮಾಧಾನ ಮಾಡುವ ದನಿಯಲ್ಲಿ,  ” ಮಗು,  ಕುರಿಯನ್ನು ಸಾಕುವುದೇ  ತಿನ್ನುವುದಕ್ಕೆ.   ಅದನ್ನು ಕೊನೆಯವರೆಗೆ ನಾವು ಮೇಯಿಸಿಕೊಂಡು ಇಟ್ಟುಕೊಳ್ಳಲು ಹೋದರೆ ನಮಗೆ ಅದರಿಂದ ಯಾವ ಉಪಯೋಗವು ಆಗುವುದಿಲ್ಲ.  ಅದನ್ನು  ಬೆಳಸಲು ನಾವು ಪಟ್ಟ ಶ್ರಮಕ್ಕೆ ಪ್ರತಿಫಲ ಸಿಗುವುದಿಲ್ಲ.    ಅದಕ್ಕೆ ಆ ಸಾಬರಿಗೆ ಮಾರಿದೆ.”  ಎಂದು ಹೇಳಿದರು.     ಅಪ್ಪನ ಮಾತುಗಳು  ನನಗೆ ಸಮಾಧಾನತರಲಿಲ್ಲ.    ” ಅದು ಇಲ್ಲೇ ಸುತ್ತಾ ಮುತ್ತಾ ಹುಲ್ಲು ಮೇಯ್ದು ಕೊಂಡಿತ್ತು.  ನಮಗೆ ಅದರಿಂದ ಏನು ತೊಂದರೆ ಆಗಿರಲಿಲ್ಲ.   ಅದು ಕೊನೆಯತನಕ ನಮ್ಮ ಜೊತೆಯೇ ಇರಲಿ”.   ನಡಿಯಪ್ಪ ಅದನ್ನು ವಾಪಸ್ಸು ತರೋಣ ಎಂದು ಹೇಳಿದೆ.   ಆದರೆ ಅಪ್ಪನ ಮನಸ್ಸು ಕರಗಲಿಲ್ಲ.   ಅವನಾಗಲೇ ಆ ಕುರಿಯನ್ನು ಕೂದಿರಬೇಕು.  ನಿನಗೆ ಇದೆಲ್ಲ ಅರ್ಥ ಆಗೋಲ್ಲಾ    ಹೋಗು ಆಟವಾಡಿಕೋ,   ಎಂದು ಹೇಳಿ ಹೊರಗೆ ಹೊರಟುಹೋದರು.


ನಾನು ಅಳುತ್ತಾ ತಿಂಡಿಯನ್ನು ಸಹ ತಿನ್ನದೇ ಕಂಪೌಂಡ್ ಮೂಲೆಯಲ್ಲಿ  ಕುಳಿತಿದ್ದೆ.   ನನ್ನ ತಂಗಿಯೂ ಸಹ ನಾನಿದ್ದಲ್ಲಿಗೆ ಬಂದು ನನ್ನ ನೋವಿಗೆ ಸ್ಪಂಧಿಸುವವಳಂತೆ ನನ್ನ ಮುಖವನ್ನೇ ನೋಡುತ್ತಾ ಸಪ್ಪಗೆ ಕುಳಿತಿದ್ದಳು.  ಅಷ್ಟರಲ್ಲಿ ಕುರಿ ವ್ಯಾಪಾರ ಆಗಿಹೋಗಿದ್ದ ವಿಷಯ ಅವಳಿಗೂ ತಿಳಿದಿತ್ತು.    ಅಮ್ಮ ಬಂದು ಸಮಾಧಾನ ಮಾಡಿದರು ನನ್ನ ಮನದೊಳಗಿನ ಅಳು ನಿಂತಿರಲಿಲ್ಲ.   ಆಗ ನಾನೊಂದು ನಿಶ್ಚಯಕ್ಕೆ ಬಂದೆ.   ಅಪ್ಪಾ ನನಗೆ ಹೊಡೆದರು ಸರಿಯೇ  ಆ ಕುರಿಯನ್ನು  ಆ ಸಾಬಣ್ಣನಿಂದ ಎಳೆದುಕೊಂಡು ಬರಬೇಕೆಂದು  ತೀರ್ಮಾನಿಸಿ  ಅವನ ಅಂಗಡಿಯ ಕಡೆ ಓಡಿದೆ.  ನಾನು ಹೋಗುವುದರೊಳಗೆ ಅದರ ಕತ್ತನ್ನು ಕತ್ತರಿಸಿ,  ದೇಹದ  ಮೇಲಿದ್ದ ಚರ್ಮವನ್ನು ಸುಲಿಯುತಿದ್ದ.  ಅದನ್ನು ನೋಡಿ ನನ್ನ ಕರುಳು ಕಿವುಚಿದ ಹಾಗಾಯ್ತು.   ನನ್ನ ಚರ್ಮವನ್ನೇ ಸುಲಿಯುತಿದ್ದಾನೇನೋ ಎಂಬಂತೆ ಭಾಸವಾಗತೊಡಗಿತು.   ಅಲ್ಲಿ ನಿಂತು ಆ ದೃಶ್ಯವನ್ನು ನೋಡಲಾಗಲಿಲ್ಲ.  ಅಲ್ಲಿಂದ  ಎಲ್ಲಿಗೆ ಎಂಬ ಅರಿವಿಲ್ಲದವನಂತೆ ಓಡಿದೆ.   ವಾಸ್ತವಕ್ಕೆ ಬಂದಾಗ  ನಮ್ಮ ಶಾಲೆಯ ಪಕ್ಕದಲ್ಲಿದ್ದ ಎತ್ತರವಾದ ಬಂಡೆಯ ಮೇಲೆ ನಿಂತಿದ್ದೆ.  ಸಂಜೆಯವರೆಗೂ ಅದರ ಮೇಲೆಯೇ ಕುಳಿತಿದ್ದೆ.    ಆದರೂ ಮನಸ್ಸಿಗೆ ಸಮಾಧಾನವಾಗಲಿಲ್ಲ.   ಕತ್ತಲು ಕವಿಯಲಾರಂಭಿಸಿತು  ಮೆಲ್ಲನೆ ಮನೆಯ ಕಡೆ ಹೊರಟೆ.


ಅಪ್ಪಾ ಇನ್ನು ಬಂದಿರಲಿಲ್ಲ.  ” ಬೆಳಿಗ್ಗೆ ಹೋದವನು.  ಎಲ್ಲೋ ಹೊರಟುಹೋಗಿದ್ದೆ.  ಬೆಳಿಗ್ಗೆ ತಿಂಡಿಯನ್ನು ಸಹ  ತಿಂದಿರಲಿಲ್ಲ.   ಆಟ ಆಡ್ತಾಯಿದ್ದರೆ ಎಲ್ಲವನ್ನು ಮರೆತು ಬಿಡ್ತೀಯ.  ಕೈ ತೊಳೆದುಕೋ.   ಊಟ ಹಾಕಿಕೊಡ್ತೀನಿ” ಅಂದಳು ಅಮ್ಮ.  ನನಗೆ ಊಟ ಮಾಡುವುದಕ್ಕೆ ಇಷ್ಟವಿಲ್ಲದಿದ್ದರೂ ಸಹ ಅಮ್ಮನ ಬಲವಂತಕ್ಕೆ ಕೈ ತೊಳೆದುಕೊಂಡು ಬಂದು ಊಟಕ್ಕೆ ಕುಳಿತೆ.   ಈ ದಿನ ಮಾಂಸದ ಅಡಿಗೆಯೆಂದು   ವಾಸನೆಯಿಂದಲೇ ತಿಳಿಯುತ್ತಿತ್ತು.   ಮೊದಲು ಅನ್ನ ಹಾಕಿಕೊಂಡು ಬಂದು ತಟ್ಟೆಗೆ ಸುರಿದಳು ಅಮ್ಮ.   ಮತ್ತೊಂದು ಪಾತ್ರೆಯಲ್ಲಿ ತಂದಿದ್ದ  ಮಾಂಸದ ಸಾರನ್ನು  ಸೌಟಿನಿಂದ ಸ್ವಲ್ಪ ಸ್ವಲ್ಪವೇ ಹಾಕುತಿದ್ದರು.   ನಾನು ಮೌನವಾಗಿದ್ದೆ.   ” ಸಾಕೇನೋ” ಎಂದಳು.   ” ಅಮ್ಮ ಈ ಮಾಂಸವನ್ನು  ಎಲ್ಲಿಂದ  ಕೊಂಡು ತಂದೆ”   ಎಂದು ಕೇಳಿದೆ.     ”ನಮ್ಮ ಕುರಿಯನ್ನು ತಗೊಂಡು ಹೋಗಿದ್ದನಲ್ಲ ಆ ಸಾಬಣ್ಣ ತಂದುಕೊಟ್ಟಿದ್ದು”  ಹೇಳಿ ಕೋಣೆಗೆ  ಹೋದಳು ಅಮ್ಮ.    ಅಮ್ಮನ ಮಾತು ಕೇಳಿ ವಾಂತಿ ಬರುವ ಹಾಗಾಯಿತು.   ಆದರೆ ಹೊಟ್ಟೆಯಲ್ಲಿ ಏನು ಇಲ್ಲದ ಕಾರಣ ವಾಂತಿಯಾಗಲಿಲ್ಲ.   ತಟ್ಟೆಗೆ ಕೈ ತೊಳೆದು ಹೊರಗೆ ಬಂದು ಬಿಟ್ಟೆ.
* * * * * * * *

Friday, February 3, 2012

------ '' ಹರೆಯ ''-----




ಹೆಂಡ ಕುಡಿದ ಕೋತಿಯಂತ ಮನಸ್ಸು 
ಎಲ್ಲಂದರಲ್ಲೇ  
ಕಾರಿಕೊಳ್ಳುವ ಕನಸುಗಳು 
ಹಾದಿ ತಪ್ಪಿದ ಗಮ್ಯ 
ಲಗ್ಗೆಯಿಟ್ಟಲ್ಲೆಲ್ಲ ಕಾಮನ ಚಿತ್ರಗಳೇ....!

ಕಣ್ಣು ಹಾಯಿಸಿದಲ್ಲೆಲ್ಲ 
ಉಬ್ಬು ತಗ್ಗುಗಳ ಮೆರೆವಣಿಗೆ 
ಬೆರಗಿನಾಕರ್ಷಣೆ 
ನಿಂತಲ್ಲೇ ಬಿಸಿಯುಸಿರ ಸ್ನಾನ 
ಕಣ್ಣ  ತುಂಬೆಲ್ಲ  ನಕ್ಷತ್ರಗಳೇ ....!

ಜಾರುವ ಮನಸಿನೋಳಗೊಂದು 
ಹಸಿ ಬಿಸಿ  ಬಯಕೆಗಳ ಮೇಲಾಟ...!
ಬೆವರ ವಾಸನೆಗೆ 
ಕನಸಿನೂರಿನ ಬಾಗಿಲ ಬಡಿದು 
ಒಮ್ಮೆ ಇಣುಕುವಾಸೆ...,

ಆವೇಗ ಆವಿಯಾಗುವ ಮೊದಲೇ 
ಹೊಸಲೋಕವನ್ನೊಮ್ಮೆ  ಸ್ಪರ್ಶಿಸಿ 
ಪ್ರಕೃತಿಯಲಿ ಲೀನವಾಗಿ 
ಬೀಗುವಾಸೆ.....?

Tuesday, January 10, 2012


----------ನಾನೇ-----
ಅಷ್ಟಕ್ಕೂ ನಾನು ಯಾರು...?
ನಾನ್ಯಾರ ರಾಯಭಾರಿ 
ನಾನು ನಾನೇ. 

ಬುದ್ಧಿಮತ್ತೆಯಲ್ಲಿ ಪ್ರಚಂಡ 
ಕಾರ್ಯರೂಪದಲ್ಲಿ ಪ್ರಕಾಂಡ 
ಶತ್ರುವು ನಾನೇ 
ಮಿತ್ರನು ನಾನೇ 
ಇಷ್ಟ ಅನಿಷ್ಟಗಳ 
ಬ್ರಹ್ಮಾಂಡ ಶೃಷ್ಟಿ ನಾನೇ....!
ಬ್ರಹ್ಮನಿಗೆ ಸವಾಲಾಗಿ 
ಬ್ರಹ್ಮಾಂಡ ಭೇದಿಸಲೋಗಿ
ಅಪಜಯನಾದವನು ನಾನೇ ನಾನೇ...!!


ಅಹಂ ಬ್ರಹ್ಮಾಸ್ಮಿ 
ಅಂದವನಾರು 
ಆದುವು  ನಾನೇ ...!!
ಸೀಮೋಲಂಘನ ಮಾಡಿ  
ನಕ್ಷತ್ರಗಳ ದಾಟಿ 
ಗ್ರಹ ಉಪಗ್ರಹಗಳ ತಟ್ಟಿ
ಎದೆಯುಬ್ಬಿಸಿ ನಡೆದವನು ನಾನೇ...!!


ಖಂಡ ಉಪಖಂಡಗಳ 
ಮೇರೆಯ ಮೀರಿ
ಬಡಿದಾಡಿ ನೆತ್ತರ ಹರಿಸಿ 
ಸಾವುನೋವಿಗೆ ಶ್ರೀಕಾರ 
ಹಾಕಿದವನು ನಾನೇ...!


ಮೃತ್ಯುಂಜಯನೊಬ್ಬ ಸಿಕ್ಕರೆ 
ಮುಷ್ಟಿಯೊಳಡಗಿಸಿಟ್ಟು 
ಬ್ರಹ್ಮನನ್ನೇ ಎಡೆಮುರಿ ಕಟ್ಟಿ 
ನಾನಾಗುವೆ ನಾನು ನಾನೇ...!!!!

Thursday, January 5, 2012


_____ಆವೇಶಕ್ಕೆ ಬಲಿಯಾದ ಕಂದ_______

ಆಕೆ ತನ್ನ ಮಗನನ್ನೇ ಕೊಂದಿದ್ದಾಳೆ ಎಂಬುದನ್ನು ಕೇಳಿ ಒಂದು ಕ್ಷಣ ಆಶ್ಚರ್ಯಚಕಿತನಾದೆ. ಆಕೆ ತನ್ನ ಮಗನನ್ನು ಕೊಂದಿದ್ದಾಳೆ ಎಂದು ಆರೋಪಿಸಿ ಪೊಲೀಸ ಠಾಣೆಯಲ್ಲಿ ದೂರು ನೀಡಿರುವುದು ಆಕೆಯ ಪತಿಯೇ. ಈಗ ಆರೋಪಿತಳನ್ನು ಬೇರೆಯವರ ಮೂಲಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಲು ಪ್ರಯತ್ನಿಸುತ್ತಿರುವುದು ಕೂಡ ಆಕೆಯ ಪತಿಯೇ.
ಮಾದಣ್ಣ ಹಾಗು ಗೌರಮ್ಮನವರದು ಇಬ್ಬರು ಮಕ್ಕಳೊಂದಿಗಿನ ಮಧ್ಯಮ ವರ್ಗದ ಸಂತೃಪ್ತಿ ಸಂಸಾರ. ಮಗ ರಮೇಶನಿಗೆ 5 ವರ್ಷ. ಮಗಳು ಲಕ್ಷ್ಮಿಗೆ 7 ವರ್ಷ. ಇಬ್ಬರ ಮುಖ್ಯ ಕಸುಬು ವ್ಯವಸಾಯ. 
ನಾಳೆಯ ಲಕ್ಷ್ಮಿ ಪೂಜೆಗೆ ಮನೆಯಲ್ಲವನ್ನು ಶುಚಿಗೊಳಿಸಿ, ಗೌರಮ್ಮ ಗಂಡನ ದಾರಿ ಕಾಯುತಿದ್ದಳು. ಮಾದಣ್ಣ ಮನೆಗೆ ಬಂದ ತಕ್ಷಣವೇ, ನಾಳೆ ಹಬ್ಬಕ್ಕೆ ನನಗೆ ಸೀರೆ, ಮಕ್ಕಳಿಗೆ ಹೊಸ ಬಟ್ಟೆ ಜೊತೆಗೆ ಗಿರವಿ ಅಂಗಡಿಯಲ್ಲಿಟ್ಟಿರುವ, ನನ್ನ ಓಲೆ ಜುಮುಕಿ, ಮಾಂಗಲ್ಯ ಸರವನ್ನು ನಾಳೆ ಬೆಳಿಗ್ಗೆ ಬಿಡಿಸಿಕೊಂಡು ತರಲೇ ಬೇಕು ಎಂದು ತಾಕೀತು ಮಾಡಿದಳು. ಮಾದಣ್ಣ ಸರಿ ಎಂದು ತಲೆಯಲ್ಲಾಡಿಸಿ ಊಟ ಮಾಡಿ ಮಲಗಿದ.
ಮಾದಣ್ಣ, ಬೆಳಿಗ್ಗೆ ತನ್ನ ಬಳಿಯಲ್ಲಿದ್ದ ಚೂರು ಪಾರು ಹಣವನ್ನೆಲ್ಲ ಒಟ್ಟುಗೂಡಿಸಿ, ಆ ಹಣದಲ್ಲಿ ಮಕ್ಕಳಿಗೆ ಬಟ್ಟೆ ಹಾಗು ಹೆಂಡತಿಗೆ ಸೀರೆಯನ್ನು ತರಲಷ್ಟೇ ಸಾಧ್ಯವಾಯಿತು. ತನ್ನ ಗಂಡ ವಡವೆಗಳನ್ನು ಬಿಡಿಸಿಕೊಂಡು ತರುತ್ತಾನೆ ಎಂಬ ನಿರೀಕ್ಷೆಯಲ್ಲಿದ್ದ ಗೌರಮ್ಮ ನಿಗೆ ಬಟ್ಟೆಗಳನ್ನಷ್ಟೇ ನೋಡಿ ನಿರಾಶೆಯಾಯಿತು. ವಡವೆಗಳಿಲ್ಲದೆ ಲಕ್ಷ್ಮಿ ಪೂಜೆ ಹೇಗೆ ಮಾಡುವುದೆಂಬ ಚಿಂತಯಿಂದ ಮೌನವಾದಳು. ಅಕ್ಕ ಪಕ್ಕದ ಮನೆಯ ಹೆಂಗಸರನ್ನು ಸಂಜೆ ಮನೆಗೆ ಲಕ್ಷ್ಮಿ ಪೂಜೆಗೆ ಬರಲೇಬೇಕೆಂದು ಅದಾಗಲೇ ಹೇಳಿ ಬಂದಿದ್ದಳು. ಸಂಜೆ ಅವರುಗಳು ಮನೆಗೆ ಬಂದರೆ, ಯಾವ ಮುಖವನ್ನು ಹೊತ್ತುಕೊಂಡು ಪೂಜೆ ಮಾಡುತ್ತಿಲ್ಲ ಎಂದು ಹೇಳುವುದು ಎಂಬ ಪ್ರಶ್ನೆ ಅವಳನ್ನು ಕಾಡತೊಡಗಿತು. 
ಮಾದಣ್ಣ, ತನ್ನ ಹಣದ ಬಿಕ್ಕಟ್ಟು, ಈಗ ತಾನಿರುವ ಪರಿಸ್ಥಿತಿಯನ್ನು ಪರಿ ಪರಿಯಾಗಿ ಹೇಳಿದರು ಗೌರಮ್ಮ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಮಾದಣ್ಣ ತನ್ನ ಹೆಂಡತಿಯನ್ನು ಆ ಸ್ಥಿತಿಯಲ್ಲಿ ಯಾವತ್ತು ನೋಡಿದವನಲ್ಲ. ಇದುವರೆವಿಗೂ ತನ್ನ ಹೆಂಡತಿಯನ್ನು ಯಾವೊಂದು ವಿಷಯದಲ್ಲೂ ನೋಯಿಸಿದವನು ಅಲ್ಲ.
ಬೇರೆಯವರ ಬಳಿ ಸಾಲ ಮಾಡಿದರು ಸರಿಯೇ... ವಡವೆಗಳನ್ನು ಬಿಡಿಸಿಕೊಂಡು ಬಂದು, ಹೆಂಡತಿಯ ಮುಖದಲ್ಲಿ ನಗುವನ್ನು ತರಿಸಬೇಕೆಂದು ನಿರ್ಧರಿಸಿದ ಮಾದಣ್ಣ, ಏನೊಂದು ಮಾತನಾಡದೆ ಹೊರಗಡೆ ಹೋದನು. 
ಅಮ್ಮ ಹಸಿವಾಗುತ್ತಿದೆ ಏನಾದರು ಕೊಡು ಎಂದು ಗೌರಮ್ಮಳನ್ನು ಮಕ್ಕಳು ಅಲ್ಲಾಡಿಸಿದಾಗಲೇ, ಆಕೆ ವಾಸ್ತವಕ್ಕೆ ಬಂದದ್ದು. ತನ್ನ ಮಕ್ಕಳನ್ನು ನೋಡುತಿದ್ದ ಹಾಗೆ ಅವರನ್ನು ತಬ್ಬಿಕೊಂಡು ಆಳುವುದಕ್ಕೆ ಪ್ರಾರಂಭಿಸಿದಳು ಗೌರಮ್ಮ. ಏನು ತಿಳಿಯದೆ ಕಕ್ಕಾಬಿಕ್ಕಿಯಾದ ಮಕ್ಕಳು ತಾಯಿಯೊಡನೆ ತಾವು ಆಳುವುದಕ್ಕೆ ಪ್ರಾರಂಬಿಸಿದವು. ಸ್ವಲ್ಪ ಹೊತ್ತಿನ ನಂತರ ಸಮಾಧಾನವಾದ ಗೌರಮ್ಮ ಒಂದು ನಿಶ್ಚಯಕ್ಕೆ ಬಂದಳು. 
ಬೇಗ ಬೇಗ ಅಕ್ಕಿತೊಳೆದು ಅನ್ನಕ್ಕೆ ಇಟ್ಟಳು. ರಾತ್ರಿ ಮಾಡಿದ ಸಾರು ಆ ಹೊತ್ತಿಗೆ ಸಾಕಾಗುತ್ತಿತ್ತು. ಅನ್ನ ಬೇಯುತಿದ್ದಂತೆ ಗೌರಮ್ಮನ ಎದೆಯು ಸಹ ನಿರಾಶೆಯಿಂದ ಬೇಯುತಿತ್ತು. ಅಕ್ಕಪಕ್ಕದವರಿಗೆ ಸಂಜೆ ಹೇಗೆ ಮುಖ ತೋರಿಸುವುದೆಂಬ ಆಲೋಚನೆಯು ಅವಳನ್ನು ಮತ್ತಷ್ಟು ದುಃಖಕ್ಕೆ ಈಡುಮಾಡಿತ್ತು. ಅದೇ ಚಿಂತೆಯಲ್ಲಿಯೇ ಮೂರೂ ತಟ್ಟೆಗಳಿಗೆ ಅನ್ನ ಸಾರಿನ ಜೊತೆ, ಭತ್ತಕ್ಕೆ ಸಿಂಪಡಿಸಲು ತಂದಿದ್ದ ಔಷಧಿಯನ್ನು ಸಹ ಕಲಸಿಕೊಂಡು ಬಂದು ಮಕ್ಕಳಿಗೆ ಕೊಟ್ಟಳು. ತುಂಬಾ ಹಸಿದಿದ್ದ ಮಕ್ಕಳು ಏನೊಂದು ಮಾತನಾಡದೆ, ಸ್ವಲ್ಪವೂ ಬಿಡದಂತೆ ತಿಂದುಕೊಂಡರು. ಗೌರಮ್ಮ ತನ್ನ ತಟ್ಟೆಯಲ್ಲಿದ್ದ ಅನ್ನವನ್ನು ತಿಂದವಳೇ ಮಕ್ಕಳನ್ನು ಹೊರಗಡೆ ಕಳುಹಿಸದೆ, ನನ್ನ ಜೊತೆ ಸ್ವಲ್ಪ ಹೊತ್ತು ಮಲಗಿಕೊಳ್ಳಿ ಎಂದು ಚಾಪೆ ಹಾಸಿ ಮಕ್ಕಳಿಗೆ ಮಲಗಲು ಹೇಳಿ ತಾನು ಮಲಗಿಕೊಂಡಳು. 
ಮಾದಣ್ಣ ಸ್ನೇಹಿತರಿಬ್ಬರ ಬಳಿ ಸಾಲ ಮಾಡಿ ವಡವೆಯನ್ನು ಬಿಡಿಸಿಕೊಂಡವನೇ, ಹೆಂಡತಿಗೆ ಈ ವಡವೆಗಳನ್ನು ನೀಡಿ ಅವಳು ಖುಷಿಯಾಗುವುದನ್ನು ನೋಡಬೇಕೆಂಬ ತವಕದಿಂದ ಓಡುವ ನಡಿಗೆಯಲ್ಲಿಯೇ ಮನೆಯ ಬಳಿಗೆ ಬಂದನು. ಬಾಗಿಲನ್ನು ನಿಧಾನಕ್ಕೆ ತಳ್ಳಿದನು. ಅಲ್ಲಿನ ದೃಶ್ಯವನ್ನು ಕಂಡು ಒಂದು ಕ್ಷಣ ಅವನಿಗೆ ಮಾತೇ ಹೊರಡದಂತಾಯಿತು. ಸಾವರಿಸಿಕೊಂಡು ಜೋರಾಗಿ ಕಿರುಚ ತೊಡಗಿದನು. ಅಕ್ಕ ಪಕ್ಕದ ಮನೆಯವರುಗಳು ಗಾಬರಿಯಿಂದ ಓಡಿ ಬಂದು ನೋಡಿದರೆ, ಮಾದಣ್ಣನ ಹೆಂಡತಿ ಮಕ್ಕಳು ಹೊಟ್ಟೆ ಹಿಡಿದುಕೊಂಡು ನರಳುತ್ತಾ ಒದ್ದಾಡುತಿದ್ದರು. ನೋಡ ನೋಡುತಿದ್ದಂತೆ ಮಾದಣ್ಣನ ಮಗ ಅಪ್ಪಾ ಎಂದು ಒಂದು ಬಾರಿ ಜೋರಾಗಿ ಕೂಗಿದವನೆ ನಿಶ್ಚಲನಾದನು. 
ಎಲ್ಲರು ಸೇರಿ ಹತ್ತಿರದ ಆಸ್ಪತ್ರೆಗೆ ಸೇರಿಸಿದರು. ವೈದ್ಯರು ಸಾಹಸದಿಂದ ತಾಯಿ ಮಗಳನ್ನು ಸಾವಿನ ದವಡೆಯಿಂದ ಪಾರುಮಾಡಿದರು. ಗೌರಮ್ಮ ಸುಧಾರಿಸಕೊಂಡ ಮೇಲೆ, ಪೊಲೀಸರು ಆಕೆಯ ಗಂಡ ಮಾದಣ್ಣನಿಂದ ಹೇಳಿಕೆ ಪಡೆದು ಗೌರಮ್ಮಳ ವಿರುದ್ಧ ಭಾರತೀಯ ದಂಡ ಸಂಹಿತೆ ೩೦೨ ರಡಿಯಲ್ಲಿ ಮಗನನ್ನು ಕೊಲೆ ಮಾಡಿದ ಆರೋಪ ಹೊರಿಸಿ, ಪ್ರಕರಣವನ್ನು ದಾಖಲು ಮಾಡಿ ನ್ಯಾಯಾಲಯಕ್ಕೆ ಸಲ್ಲಿಸಿದರು. ನ್ಯಾಯಾಲಯವು ಮುಂದಿನ ವಿಚಾರಣೆಗೆಂದು ಆಕೆಯನ್ನು ಹದಿನೈದು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. 
ಮಾದಣ್ಣ ಆಕೆಯನ್ನು ಜಾಮೀನಿನ ಮೇಲೆ ಹೊರತರಲು ವಕೀಲರ ಮೂಲಕ ತುಂಬಾ ಪ್ರಯತ್ನಿಸಿದ. ಆದರೆ ಸಾಧ್ಯವಾಗಲಿಲ್ಲ. ಆಕೆ ನ್ಯಾಯಾಂಗ ಬಂಧನದಲ್ಲಿರುವಂತೆಯೇ ವಿಚಾರಣೆ ನಡೆದು ಪ್ರತಿಕೂಲ ಸಾಕ್ಷಿಗಳ ನೆರವಿನಿಂದ ಆಕೆ ಜೈಲಿನಿಂದ ಹೊರಗಡೆ ಬರುವಂತಾಯ್ತು. 
ಗಂಡ ಹೆಂಡತಿ ಈಗ ಒಂದಾಗಿ ಜೀವನ ನಡೆಸುತಿದ್ದಾರೆ. ಆದರೆ ಕಣ್ಣೆದಿರೇ ನರಳಿ ಹೊರಳಾಡುತ್ತಾ ಸತ್ತ ಮಗನ ನೆನೆದು ಈಗಲೂ ಕಣ್ಣೀರಿಡುತಿದ್ದಾರೆ.
[ ಸತೀಶ್ ರಾಮನಗರ]

Monday, December 12, 2011

...ಅವಳಿಗೂ ಹೃದೆಯವಿದೆ ....

ದೀಪದ ಕೆಳಗಿನ ಕತ್ತಲೆ.
----------------------
ಉತ್ಸಾಹದಿಂದ ಬಂದವನಿಗೆ
ಮೈಯನ್ನೇ ಹಾಸಿಗೆಯನಿಸಿ
ಮೈ ಬಿಸುಪನ್ನು ಬಸಿದು
ಹಗುರಾಗಿಸಿದವಳ
ಒಡಲ ಅರ್ತನಾದಾದಗಳು
ಕರಗಿ ಹೋಗಿವೆ ಕಾರಿರುಳಲ್ಲಿ.

ಕನಸುಗಳು ಕಣ್ಣೀರುಡುವಾಗ
ಅವಳ ಆಸೆಗಳಿಗೇನು ಕೆಲಸ!
ಕದವಿಕ್ಕಿ ಕುಳಿತ ಮನಕೆ
ಕತ್ತಲೆ ಅವಳ ಜೊತೆಗಾರನಲ್ಲವೆ!?
ಅವಳ ಪಾಲಿಗೆ ಬೆಳಕು ಬೇಗೆಯಾಗಿದೆ.

ಅವಳಿಗೊಂದು ಬದುಕಿದೆ
ಆ ಬವಣೆಯ ಹಿಂದೆ ಹಸಿವಿದೆ
ನೆಚ್ಚಿಕೊಂಡ ಹೊಟ್ಟೆಗಳ ಹಿಂದೆ
ಅಪ್ಪಿಕೊಂಡ ಸಂಬಂಧದ ಮೇಲೆ
ಬೆದೆಗೆ ಬಂದ ನಾಯಿಗಳು ಸವಾರಿ ಮಾಡಿವೆ.!

ಆದರೆ...!!!

ತನ್ನಂತಾನೆ ಉರಿದುಕೊಂಡು
ಬೆಳಕ ಕೊಡುವ
ದೀಪದ ಕೆಳಗಿನ ಕತ್ತಲೆ ಅವಳು.!!

Friday, November 25, 2011

ನೀ ಬರೋ ದಾರಿಯಲಿ....
ಕಂಗಳು ಕಾದಿರಲು
ಕನಸಿನ ದಾರಿಯಲಿ...,

ಮಲ್ಲಿಗೆ ಚಲ್ಲಿದೆ
ಸಂಪಿಗೆ ಕಂಪಿದೆ
ಜಾಜಿಯ ಸೊಬಗಿದೆ 

ನಿನ್ನ ಬರುವಿಕೆ ಕಾಯುತಲಿ...!

ಕನಿಕರ ಬಾರದೆ
ಕಂಬನಿ ಕಾಣದೆ
ಹೃದೆಯದ ಬೇಗೆಯು
ನಿನ್ನನು ತಾಕದೆ....!

ನನ್ನ ಹೃದೆಯಕ್ಕೆ
ಭಾವವೊಂದೇ
ಭಾವಕ್ಕೆ ಭಾಷೆಯೊಂದೇ 

ಆ ಭಾಷೆಗೆ ಭಾಷ್ಯ ನೀನೆ ನೀನೆ...!

ಮನಸದು ಮಿಡಿಯುತಿದೆ
ಒಲವಿದು ಬಯಸುತಿದೆ
ಸೊಗಸಿನ ಸೊಗಡಿನಲ್ಲಿ
ಸವೆದಿಹ ನಿರೀಕ್ಷೆಯಲಿ...!

ಆಶಯ ಗೀತೆ
ಅಭಿಜ್ಞಾನದಂತೆ
ನಿನಗೀಗ ಕೇಳಿಸದೆ
ನಿನ್ನೊಲವು ಕಾಯುತಿದೆ...

ಪ್ರಥಮದಿ ಅಂಕುರ
ಪ್ರೇಮವು ನಿರಂತರ
ಪ್ರೀತಿಯ ಅಂತರ
ಕಾಲವು ಮಾಗಲು
ಸಾವಲಿ ಕೊನೆಯದು..
ನನ್ನ ಸಾವಲಿ ಕೊನೆಯಿದು.

                ಪ್ರೀತಿಯಿಂದ ಸತೀಶ್, ರಾಮನಗರ 

Monday, November 14, 2011



-----ಕರಗಿ ಹೋದನವನು----- ಇದು ಕಲ್ಪನೆಯಲ್ಲ ನಿಜದ ಕಥೆ.  { ದಯಾ ಮರಣ ಬೇಕೇ ಬೇಡವೇ]
          ಆ ದಿನ ಕೆಲಸಕ್ಕೆ ಹೊರಡಲು ತಯಾರಾಗುತಿದ್ದೆ.  ನಮ್ಮ ಅಣ್ಣ ಸ್ವಲ್ಪ ಗಾಬರಿಯಿಂದ ಬಂದವನೇ '' ಶ್ರೀಧರನಿಗೆ ಮಂಡಿ ನೋವುಬರುತಿತ್ತು.  ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಕ್ಸರೇ ತೆಗಿಸಿದೆ.  ಅದನ್ನು ನೋಡಿದ ಡಾಕ್ಟ್ರು, ಮಂಡಿಗೆ ಆಪರೇಶನ್  ಮಾಡಬೇಕು ಬೆಂಗಳೂರಿಗೆ ಕರೆದುಕೊಂಡು ಹೋಗಿ ಎಂದರು'' ನಿನಗೆ ಆ ಡಾಕ್ಟ್ರು ಪರಿಚಯ ಇದ್ದರಲ್ವ.  ಅವರಿಗೆ ಒಂದೆರಡು ಸಾವಿರ ಕೊಟ್ಟರಾಯ್ತು.  ಇಲ್ಲೇ ಆಪರೇಶನ್ ಮಾಡೋಕೆ ಹೇಳೋ ಅಂದ.  ಸರಿ ಹೇಳಿ ನೋಡ್ತೀನಿ  ಎಂದು ಆಸ್ಪತ್ರೆಗೆ ಹೋಗಿ ಡಾಕ್ಟರನ್ನು ಭೇಟಿ ಮಾಡಿ ವಿಚಾರಿಸಿದೆ.  ನಿಮಗೆ ಆ ಹುಡುಗ ಏನಾಗಬೇಕು ಎಂದು ವಿಚಾರಿಸಿದರು.  ಅವನು ನಮ್ಮ ದೊಡ್ಡಪ್ಪನ ಮೊಮ್ಮಗ, ತಂದೆಗೆ ಒಬ್ಬನೇ ಮಗ.   ಮದುವೆಯಾದ ತುಂಬಾ ದಿನಗಳ ನಂತರ ಹುಟ್ಟಿದ.  ಹಿಂದಿನ ವರ್ಷ ಎಸ್ ಎಸ್ ಎಲ್ ಸಿ ಮುಗಿಸಿದ್ದಾನೆ ಎಂದೆ.  ನೀವು ಸ್ವಲ್ಪ ಹೊರಗಡೆ ನಿಂತಿರಿ ಎಂದು ನನ್ನ ಅಣ್ಣನಿಗೆ ಹೇಳಿ, ಎಕ್ಸರೇ ತೋರಿಸುತ್ತಾ ...ನಿಮ್ಮ ಅಣ್ಣನ  ಮಗನಿಗೆ ಬೋನ್ ಕ್ಯಾನ್ಸರ್ ಆಗಿದೆ.  ಯಾವುದಕ್ಕೂ ಕಿದ್ವಾಯ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚೆಕ್ ಮಾಡಿಸಿ ಎಂದರು.  ಒಂದು ಕ್ಷಣ ನನಗೆ ನಂಬಿಕೆ ಬರಲಿಲ್ಲ.  ಡಾಕ್ಟರ್ .....ಎಂದೆ.  ನನಗೆ ತಿಳಿದ ಮಟ್ಟಿಗೆ ಸತ್ಯವನ್ನೇ ಹೇಳಿದ್ದೇನೆ ಎಂದರು.  ದುಗುಡವನ್ನು ತೋರಗೊಡದೆ,  ಶ್ರೀಧರ ಹಾಗೂ ನನ್ನ ಅಣ್ಣನನ್ನು  ಮನೆಗೆ ಕರದುಕೊಂಡು ಬಂದೆ.  ಅಣ್ಣನ ಕೈಗೆ ಸ್ವಲ್ಪ ಹಣವನ್ನು ನೀಡಿ, ಅವನ ಮಂಡಿಗೆ ಇಲ್ಲಿ ಆಪರೇಶನ್ ಮಾಡೋಕೆ ಆಗಲ್ವಂತೆ.  ಅದಕ್ಕೆ ನೀನು ಬೆಳಿಗ್ಗೆ ಕಿದ್ವಾಯ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿಕೊಂಡು ಬಾ ಎಂದು ನಿಜಾಂಶ ಮುಚ್ಚಿಟ್ಟು ಕಳುಹಿಸಿದೆ.  
           ಅಲ್ಲೂ ಕೂಡ ಆಪರೇಶನ್ ಮಾಡಲೇ ಬೇಕು ಅಂತ ಹೇಳಿದ್ದಾರೆ.   ಅಂಗೈ ಅಗಲ ಇದ್ದ ತುಂಡು ಭೂಮಿಯನ್ನು ಮಾರಿ,  ಸಾಲ ಸೋಲ ಮಾಡಿ ಆಪರೇಶನ್ ಮಾಡಿಸಿದ್ದಾಯ್ತು. ಒಂದು ವರ್ಷ ಚನ್ನಾಗಿಯೇ ಕಳೆಯಿತು.  ನನ್ನ ಅಣ್ಣ ಅತ್ತಿಗೆ ಕೂಡ ಅಷ್ಟೆಲ್ಲ ಸಾಲವಾದರು ಸಹ, ಮಗ... ಮತ್ತೆ ಮೊದಲಿಂತಾದನಲ್ಲ ಎಂದು ಖುಷಿಯಿಂದಿದ್ದರು.  ಒಂದು ದಿನ ಮನೆಯ ಬಳಿ ಶ್ರೀಧರ ಬಂದವನೇ, ಚಿಕ್ಕಪ್ಪ ನನಗೆ ಒಂದು ಆಟೋ ಕೊಂಡುಕೊಡು, ನನಗೆ ಕಾಲ ಕಳೆಯಲು ಬೇಜಾರು ಎಂದ.  ಆಯ್ತಪ್ಪ, ನೀನೆ ಯಾವುದಾದರು ಇದ್ದರೆ ಹುಡುಕು, ನಾನು ದುಡ್ಡು ಕೊಡುತ್ತೇನೆ ಎಂದು ಹೇಳಿ ಕಳುಹಿಸಿದೆ.  ಹುಡುಕಿಕೊಂಡು ಬರುತ್ತೇನೆ ಚಿಕ್ಕಪ್ಪ ಎಂದು ಹೇಳಿ ಹೋದವನನ್ನು ಮತ್ತೆ ಕಂಡದ್ದು ಆಸ್ಪತ್ರೆಯಲ್ಲಿಯೇ.  ಯಾಕೋ... ಆಟೋ ಹುಡುಕಿಕೊಂಡು ಬರುತ್ತೇನೆ ಎಂದು ಹೇಳಿದ್ದವನು ಹೀಗೆ ಆಸ್ಪತ್ರೆ ಸೇರಿದ್ದಿಯಲ್ಲಪ್ಪ ಅಂದೆ.  ಸೊಂಟದಿಂದ ಮೇಲ್ಬಾಗ ಎದೆಗೂಡು  ಎಲ್ಲಾ ತುಂಬಾ ನೋವು ಚಿಕ್ಕಪ್ಪ ಅದಕ್ಕೆ, ಅಪ್ಪಾ ಕರೆದುಕೊಂಡು ಬಂದು ಆಸ್ಪತ್ರೆಗೆ  ಸೇರಿಸಿದರು ಅಂದ.   ನಾನು ಆಗಾಗ ಹೋಗಿ ಬರುತಿದ್ದೆ.  ಆತನ ಆರೋಗ್ಯ ತೀರ ಹದಗೆಡುತ್ತಾ ಬರುತ್ತಿತ್ತು. ಅವನು ಅನುಭವಿಸುತಿದ್ದ ನೋವನ್ನು ನೋಡಲಾರದೆ ಆಸ್ಪತ್ರೆ ಬಳಿ ಹೋಗುವುದನ್ನೇ ಬಿಟ್ಟು ಬಿಟ್ಟಿದ್ದೆ.  ಆದರೆ  ಫೋನಲ್ಲಿ ಮಾತನಾಡುತಿದ್ದೆ.  ಡಾಕ್ಟರು, ಇನ್ನು ಒಂದು ತಿಂಗಳು ಅವನ ಬದುಕಿನ ಅವಧಿ ಎಂದು ನನಗೆ ಮಾತ್ರ ತಿಳಿಸಿದರು.  ಆ ಖಾಯಿಲೆಯ ಭೀಕರತೆಯ ಬಗ್ಗೆ ತಿಳಿದಿದ್ದರಿಂದ, ನಿರೀಕ್ಷಿಸಿಯೇ  ಇದ್ದೆ.  ಮಗನ ಸಾವನ್ನು ಸ್ವಾಗತಿಸಲು, ನನ್ನ  ಅಣ್ಣ ಕೂಡ ಮಾನಸಿಕವಾಗಿ ಸಿದ್ಧನಾಗಿಬಿಟ್ಟಿದ್ದ.  ಅತ್ತಿಗೆಯಿಂದ ಆ ವಿಷಯ ಮುಚ್ಚಿಟ್ಟಿದ್ದೆವು. ಆದರೂ ಅವರಿಗೆ ದೂರದ ಆಸೆ, ಯಾವ ಯಾವುದೋ ನಾಟಿ ವೈದ್ಯರನ್ನು ಕರೆಸಿ ಔಷಧಿ ಕೊಡಿಸಿದ್ದಾಯ್ತು.  ಏನು ಪ್ರಯೋಜನವಾಗಲಿಲ್ಲ.  ಹುಬ್ಬಳ್ಳಿಯಿಂದ ನಾಟಿ  ವೈದ್ಯನೊಬ್ಬ ಬಂದು ನೋಡಿದ.  ಐವತ್ತು ಸಾವಿರ ಕೊಟ್ಟರೆ ಚಿಕಿತ್ಸೆ ಕೊಡುತ್ತೇನೆ.  ನಿಮ್ಮ ಮಗ ಗುಣವಾಗುತ್ತಾನೆ ಎಂದು ನಂಬಿಸಿಬಿಟ್ಟಿದ್ದ.  ನನಗೆ ವಿಷಯ ಮುಟ್ಟಿಸಿದರು.  ಆ ನಾಟಿ, ವೈದ್ಯ ಅಲ್ಲೇ ಪಕ್ಕದೂರಲ್ಲಿ  ಠಿಕಾಣಿ ಹೂಡಿದ್ದ.  ಅವನ ಬಳಿ ನನ್ನ ಅಣ್ಣನೊಡನೆ  ಹೋದೆ.  ಆತ ತನ್ನನ್ನು ಆಯುರ್ವೇದಿಕ್ ಡಾಕ್ಟರ್ ಎಂದು ನನಗೆ ಪರಿಚಯಿಸಿಕೊಂಡ. ಪೇಶಂಟ್ ರಿಪೋರ್ಟೆಲ್ಲ ನೋಡಿದ್ದೀನಿ, ಗುಣಪಡಿಸಬಹುದು ಎಂದ.  ನನ್ನ ಅಣ್ಣನ ಮನಸ್ಸಿಗೆ ಬೇಸರವಾಗಬಾರದೆಂದು ನನ್ನ ಕೋಪವನ್ನು ಅದುಮಿಟ್ಟುಕೊಂಡು ಹೇಳಿದೆ.  ಒಂದು ಲಕ್ಷವನ್ನೇ ಬೇಕಾದರೆ ಕೊಡುತ್ತೇನೆ.  ಆತನನ್ನು ನೀನು ಬದುಕಿಸುವುದು ಬೇಡ, ಆತ ಪಡುತ್ತಿರುವ ನೋವು ಸಂಕಟವನ್ನು ಕಡಿಮೆ ಮಾಡಲಿಕ್ಕೆ ಔಷಧಿ ಕೊಟ್ಟರೆ  ಸಾಕು ಎಂದೆ.  ಏಕೋ ಆತ ನಿರುತ್ತರನಾದ. ಅಣ್ಣನಿಗೆ,  ಮತ್ತೆ ಈ ರೀತಿಯ ವ್ಯಕ್ತಿಗಳನ್ನು ನಂಬಿ ಮೋಸ ಹೋಗಬೇಡ ಎಂದು ಬುದ್ದಿ ಹೇಳಿ ಬಂದೆ.  ಎರಡು ದಿನಗಳ ಬಳಿಕ,   ಚರ್ಚಿನ ಫಾದರ್ ಎಂಬೊಬ್ಬ ವ್ಯಕ್ತಿ, ಏಸುವಿನಲ್ಲಿ ಪ್ರಾರ್ಥಿಸಿ  ಅವನ ನರಳುವಿಕೆಯನ್ನು ಕಡಿಮೆ ಮಾಡುತ್ತೇನೆ ಎಂದು, ನನ್ನ ಅಣ್ಣ ಅತ್ತಿಗೆಯನ್ನು ನಂಬಿಸಿದ.  ಅವರ ಮನಸ್ಸಿಗೆ ಬೇಸರವಾಗಬಾರದೆಂದು ನನ್ನ ಕಾರಿನಲ್ಲಿಯೇ ಕರೆದುಕೊಂಡು ಚರ್ಚಿನ ಬಳಿ ಹೋದೆ.  ಶ್ರೀಧರ ತುಂಬಾ ಕಷ್ಟದಿಂದ ಮೆಟ್ಟಿಲನ್ನು ಏರಿ, ಆಯಾಸ ಪಡುತ್ತಾ ಕುಳಿತುಕೊಂಡ.  ಫಾದರ್, ಕೊಬ್ಬರಿ ಎಣ್ಣೆಯನ್ನು ಏಸು ಮೂರ್ತಿಯ ಬಳಿ ಇಟ್ಟು ಪ್ರಾರ್ಥಿಸಿ, ಅದನ್ನು ತಂದು ಶ್ರೀಧರನ ತಲೆಗೆ ಸವರಿದ.  ದಿನ ಅವನ ತಲೆಗೆ ಎಣ್ಣೆ ಹಚ್ಚಿರೆಂದು ಡಬ್ಬಿಯನ್ನು ನೀಡಿದ.  ಅಲ್ಲಿಗೆ ಬಂದು ಶ್ರೀಧರನ ಆಯಾಸ ಜಾಸ್ತಿ ಆಯಿತೆ ಹೊರತು.  ನೋವು ಮಾಯವಾಗಲಿಲ್ಲ.  ಆ ಹುಡುಗನಿಗೆ ತನ್ನ ಅಂತಿಮ ದಿನಗಳು ಸಮೀಪಿಸುತ್ತಿದೆ ಎಂದು ತಿಳಿದುಹೋಗಿತ್ತು. 
            ಒಂದು ದಿನ ಚಿಕ್ಕಪ್ಪ ನೀನು ಬರಲೇ ಬೇಕು ಎಂದು ಫೋನ್ ಮಾಡಿದ.  ನಾನು ಆತಂಕದಿಂದಲೇ  ಹೋದೆ.  ನನ್ನ ಕೈ ಹಿಡಿದುಕೊಂಡು..'' ಚಿಕ್ಕಪ್ಪ,  ನಾನು ಕಣ್ಣ ತುಂಬಾ ನಿದ್ದೆ ಮಾಡಿ ಆರು  ತಿಂಗಳಾಯ್ತು.  ಇನ್ಜೆಂಕ್ಶನ್ ಕೊಟ್ಟು ಕೊಟ್ಟು ನನ್ನ ಎರಡು ಕುಂಡಿಗಳು ಕಲ್ಲಿನಂತಾಗಿ ಹೋಗಿದೆ.  ಬಲವಂತದಿಂದ ಕೊಟ್ಟಾಗ ಪ್ರಾಣ ಹೋದಂತಾಗುತ್ತದೆ.  ನಾನು ಎರಡು ಸಾರಿ ಸಾಯಲು ಹೋದೆ.  ನಮ್ಮ ಅಪ್ಪಾ ನೋಡಿಕೊಂಡು ಮನೆಯಲ್ಲಿದ್ದ ಅಗ್ಗವನ್ನು ಬೆಂಕಿಗೆ ಹಾಕಿದ.  ನಾನು ಪಡ್ತಾಯಿರೋ ನೋವು ಯಾಕೆ ನಿಮಗೆ ಯಾರಿಗೂ ಅರ್ಥ ಆಗೋಲ್ಲ.  ಹಾಳಾದ್ದ ಸಾವು ದಿನ  ದಿನ ಒಂದೊಂದೇ ಚೂರು ಕೊಲ್ತಾಯಿದೆ.  ಡಾಕ್ಟರಿಗೆ ನನ್ನ ಸಾಯಿಸಿ ಬಿಡಿ ಎಂದು ಕಾಲು ಹಿಡಿದು ಬೇಡಿಕೊಂಡೆ ಅವರಿಗೆ ಕರುಣೆ ಬರಲಿಲ್ಲ.   ಈ ಕತ್ತಿನಿಂದ ಪೂರ್ತ ಕೆಳ ಭಾಗ ಅಸಾಧ್ಯವಾದ ನೋವು.  ನನ್ನ ಪ್ರತಿಯೊಂದು ಕಾರ್ಯಕ್ಕೂ ಈಗ ಅಪ್ಪಾ ಬೇಕೇ ಬೇಕು.  ನನ್ನಿಂದಾಗಿ ಅವರಿಬ್ಬರೂ ಹೊಟ್ಟೆ ತುಂಬಾ ಊಟ ಮಾಡಿ ಎಷ್ಟು ದಿನವಾಯ್ತೋ.    ಚಿಕ್ಕಪ್ಪ ನಿನ್ನ ಬೇಡಿಕೊಳ್ತೀನಿ, ಡಾಕ್ಟರಿಗೆ ಹೇಳಿ ನಾನು ಸಾಯುವ ಹಾಗೆ ಯಾವುದಾದರು ಔಷಧಿ ಕೊಡಲಿಕ್ಕೆ ಹೇಳು.  ಇಲ್ಲ ನಿನ್ನ ಕೈಯಿಂದ ನನ್ನ ಕುತ್ತಿಗೆಯನ್ನು ಹಿಸುಕಿ ಸಾಯಿಸಿಬಿಡು ಚಿಕ್ಕಪ್ಪ.  ನನ್ನ ಕೈಯಲ್ಲಿ ಈ ನೋವನ್ನು ತಡೆದು ಸಾಕಾಗಿ ಹೋಗಿದೆ.  ನಮ್ಮ ಅಪ್ಪಾ ದುಡ್ಡು ಖರ್ಚು ಮಾಡಿಕೊಂಡು ನನ್ನ ಜೊತೇನೆ ದಿನ ಅವನು ಸಾಯ್ತಾಯಿದ್ದಾನೆ''.    ಎಂದು ಹೇಳುವಷ್ಟರಲ್ಲಿ ಎದುಸಿರು ಬಿಡುತಿದ್ದ.  ನನ್ನ ಕಣ್ಣಿನಿಂದ ಜಾರುತಿದ್ದ ಹನಿಗಳನ್ನು ತಡೆದಿಟ್ಟುಕೊಳ್ಳಲಿಕ್ಕೆ ಆಗಲಿಲ್ಲ.  ಸ್ವಲ್ಪ ಸುಧಾರಿಸಿಕೊಂಡು, ಚಿಕ್ಕಪ್ಪ ನಾನು ಸತ್ತರೆ ನಮ್ಮ ಅಪ್ಪಾ ಅಮ್ಮನನ್ನ  ನೋಡಿಕೊಳ್ಳಲು ಯಾರು ಇಲ್ಲ.  ನೀನು ನೋಡಿಕೊಳ್ತೀ ಅನ್ನೋ ನಂಬಿಕೆ ನನಗಿದೆ,  ಎಂದು ಹೇಳುತ್ತಾ ಕಣ್ಣ ತುಂಬಿಕೊಂಡನು.  ನಾನು ಏನು ಮಾತನಾಡಲು ಸಾಧ್ಯವಾಗಲಿಲ್ಲ.  ತಲೆಯಾಡಿಸಿ ಹೊರಗೆ ಬಂದುಬಿಟ್ಟೆ.  ಐದು ದಿನಗಳ ನಂತರ ಅವನ ಸಾವಿನ ಸುದ್ದಿ ಬಂತು.
{  ಈಗ ಹೇಳಿ ದಯಾ ಮರಣ ಬೇಕೇ ಬೇಡವೇ] ಇದು ನಿಜದ ಕಥೆ.  ಕಲ್ಪನೆಯಲ್ಲ.