ಬಚ್ಚಿಟ್ಟ ಹೃದೆಯ-ತೆರೆದಿಟ್ಟ ಮನಸ್ಸು.

Thursday, June 28, 2012

---- ಕಾಲಾಯ ತಸ್ಮೈ ನಮಃ ---



'' ಎಂಥಾ ಮಗು, ಗಂಡು ತಾನೆ '' .?!!
ಇಲ್ಲ .., ಹೆಣ್ಣು ಮಗು...!
ಛೇ., ಸಾಮ್ರಾಜ್ಯ ಪಥನದ ಮುನ್ಸೂಚನೆ..!
ಗೋಡೆ ಮೇಲಿನ ಗೌಳಿ ಲೋಚಗುಟ್ಟುತ್ತಿತ್ತು
ಆದರೇನಂತೆ,
ಮುಂದಾದವು....,
ತನ್ನ ಪೌರುಷದ ಮೇಲಿನ ನಂಬಿಕೆಗೆ,
ಒಂದಲ್ಲ ಎರಡು ಗಂಡು ಮಕ್ಕಳು.
ಬಿತ್ತನೆ ಬೀಜಗಳಂತೆ
ವಂಶಾವಾಹಿನಿಯ  ತಳಿಗಳವು
ದೊಡ್ಡವ ಅಪ್ಪನಿಗೆ; ಕಿರಿಯವ ಅವ್ವನಿಗೆ
ತಲೆ ಬೋಳಿಸಿಕೊಂಡು ಕೊಳ್ಳಿ ಹಿಡಿಯುವುದಕ್ಕೆ,
ಜೊತೆಗೊಂದಿಷ್ಟು ಪಿಂಡ ಹಾಕುವುದಕ್ಕೆ..,
ಸುತ್ತಿ ಬಳಸುವುದಿಲ್ಲ, ಸ್ವರ್ಗಕ್ಕೆ ನೇರದಾರಿ
ತೋರಿಸುವ ಕುಲೋದ್ಧಾರಕರು.
ಕೀರ್ತಿಪತಾಕೆ ಹಾರಿಸುವ ಕೀರ್ತಿವಂತರು.
ನೆಲ ಕಾಣುತಿದ್ದ ಗೌಡನ ಮೀಸೆ ಆಕಾಶ ನೋಡುತ್ತಿತ್ತು. 

ಅದೊಂದು ದಿನ....

ನನ್ನ ಅಸ್ಥಿಯ ಬೂದಿ-
ಯನ್ನು  ನದಿಯಲ್ಲಿ ವಿಸರ್ಜಿಸಿರೆಂದು
ಜೀರ್ಣಾವಸ್ಥೆಯಲ್ಲಿಯೇ ಕಣ್ಮುಚ್ಚಿದ ಅಪ್ಪ.
ಆಶ್ಚರ್ಯ..! ಸಗ್ಗದ ದಾರಿ ಮುಚ್ಚಿದೆ..!
ಇಲ್ಲೇಕೆ ಬಂದಿರಿ...... ಕಿಂಕರರ ಪ್ರಶ್ನೆ..?
ಮಣ್ಣಾದ ಮೇಲೆ ಮತ್ತೇನು ಕಿರಿಕಿರಿ
ಅಪ್ಪನ ಮರು ಪ್ರಶ್ನೆ.
ಮುಕ್ತಿ ಇಲ್ಲದವರಿಗೆಂದೇ  ಇದೇ
ತ್ರಿಶಂಕೂ ಸ್ವರ್ಗ, ಹೋಗೆಂಬ ಉತ್ತರ. 
ಅಯೋಮಯನಾದ ಅಪ್ಪಾ..
ತೊರೆದುಬಂದ ದೇಹದೆಡೆಗೆ ಮತ್ತೆ ಬಂದ. 
ಮುಡಿತುಂಬಾ ಹೂ ಮುಡಿದು, ಕೈತುಂಬಾ ಬಳೆ-
ತೊಟ್ಟ ಹೆಣ್ಣಿನ ಬತ್ತಿದ ಕಣ್ಣೀರ ಜೊತೆಗೆ
ಗೌಜು ಗದ್ದಲ ಏರುದನಿಗಳ  ಮೇಲಾಟ.
ನಡುವೆ.....,
ಅನಾಥವಾಗಿ ಬಿದ್ದಿರುವ ತನ್ನ ದೇಹ.
ಮತ್ತಷ್ಟು ಸನಿಹಕ್ಕೆ ಸರಿದು ಬಂದ
ಸಮಭಾಗ ಸಿಗುವವರೆಗೂ ಹೆಣ ಸುಡಲು
ಬಿಡನೆಂಬ ಮಗನೊಬ್ಬ,
ಮರಣಶಾಸನವಿದೆ ಬೇಕಾದ್ದು ಮಾಡಿಕೊ
ಎನ್ನುವ ಮತ್ತೊಬ್ಬ.  ಹರಿಶಿಣ-
ಕುಂಕುಮಕ್ಕೆ ನನಗೆಲ್ಲಿದೆ ಎಂಬ ಮಗಳು. 
ಇದನ್ನೆಲ್ಲಾ ನೋಡಿದ ಅಪ್ಪ,  ಬಂದಷ್ಟೇ
ವೇಗವಾಗಿ ಹಿಂದಿರುಗಿ  ಹೊರಟ,
ಇವರನ್ನು ಹೆತ್ತ ತಪ್ಪಿಗೆ
ನರಕದ ಬಾಗಿಲಾದರು  ತೆರೆದಿರಬಹುದೆಂಬ
ಆಶಾಭಾವನೆಯಿಂದ...!!

Saturday, June 16, 2012

------ಋತುಮಾನ -------




ಮೊಗ್ಗು ಮೈನೆರೆದಾಗಿನ 
ಬದಲಾದ  ಮೈಯ ಬಿಸುಪು, 
ಮಾದಕತೆ ಮೈತಾಕಿ, 
ಕುತೂಹಲವಾಯ್ತು ಇಮ್ಮಡಿ.
ವಿಸ್ಮಯವಿಲ್ಲಿ ವಿಹಿತ,
ಅದು ಬರೀ ಬೆರಗಲ್ಲ.!
ಅಡಿಯಿಂದ ಮುಡಿಯವರೆಗಿನ ಅಚ್ಚರಿ.!! 
ಅಂಕು ಡೊಂಕಿನ ದಾರಿ
ಇಕ್ಕೆಲಗಳಲ್ಲಿ ಹಸಿರು ತುಂಬಿ, 
ಮಾಘದಲ್ಲಿ  ತೂಗಿ  ಬಾಗೋ   
ವಯ್ಯಾರದ ಪ್ರಕೃತಿ ಸೊಬಗ,
ಉಬ್ಬು ತಗ್ಗುಗಳ ಕಣಿವೆಯಲ್ಲಿ 

ಕಳೆದುಹೋದ ಕ್ಷಣದಲಿ, 
ಸ್ತಂಭಿಸಿದ ಬೀಸು ಗಾಳಿಯ 
ನಡುವೆ,  ಸೌಸವದ ಬೆವರು.!
ಘನೀಭವಿಸಿದ ಮೋಡ.
ಹನಿಯಾಗಿ ಸ್ಖಲಿಸುವ ಮುಂಚಿ-
ನಲಿ, ಗುಡುಗು ಮಿಂಚಿನಾರ್ಭಟ
ಸೋನೆ ಮಳೆಗೆ
ಮನ ತಣಿದ  ಇಳೆಯಂತೆ.
ಸ್ವಾದದ ಅನುಭೂತಿ 
ಸಂತೃಪ್ತಿಯ,  ಬೆನ್ನಿಗಂಟಿದ 
ಸೃಷ್ಟಿಯ ರಹಸ್ಯ.!  
ಪ್ರಕೃತಿಯ ಸಮ್ಮಿಲನದಿ   
ಬೆತ್ತಲು ಬಯಲು,
ಹೊಸ ದೃಷ್ಟಿಯ ಉಗಮ.  

Monday, May 28, 2012

-- '' ನನ್ನೀ ಪ್ರಣತಿ '' --

ಈ ಸಂಜೆಗತ್ತಲ  ತಂಪಿಂದು
ಸುಡುಕೆಂಡ  ಈ ಹೃದಯಕೆ,
ತೆರೆಸರಿಸಿ ಹೊರಚಾಚಿ
ಸಿಹಿನೆನಕೆ ಕಣ್ಣೀರಂತೆ ಒಸರಿ
ಜಿಗುಟಾಯ್ತು ಭಾವ.

ಹಿಡಿಯಷ್ಟು ಪ್ರೀತಿ
ಹೊರಲಾರದಷ್ಟು ಭಾರ
ಪಿಸುಮಾತಿನ ಲಹರಿ
ಬಿಸಿಯುಸಿರಲು ತಂಪೆನಿಸುವ ಪದೆಪು,
ಪ್ರಮೋದದಿ ಇದೋ ನನ್ನೀ ಪ್ರಣತಿ.

ಬಚ್ಚಿಟ್ಟ ಬಯಕೆಯ ಕಾಮವಲ್ಲ
ಬೆಚ್ಚನೆಯ ಹೊದಿಕೆಯಲಿ
ಮಡಿಚಿಟ್ಟ ಪ್ರೇಮ ನಮ್ಮದು
ಅವಳ ಕಣ್ಣೊಳಗಿನ ಬಿಂಬ ನಾನು 
ಮರೆತು ಕಣ್ಣ ಹನಿ ಜಾರಿಸಲವಳು.

ಕಾಯುವೆನು.....,
ಕಾಯುತಲೇ ಕಾಲನ 
ಅಪ್ಪಿದರು ಸರಿಯೇ....,
ಒಪ್ಪಿಸಿಕೊಂಡ ಹೃದಯವನು 
ಮತ್ತೆ ಕೇಳನೆಂದು...!!

ಹಳೆ ನೆನಪಿನ 
ಹೊಸ ಭಾಷ್ಯ 
ಬರೆದಿಡುವೆ ನಲ್ಲೆಗಾಗಿ 
ಮುಂದೊಂದು ದಿನ 
ಹೊರಬರಲಿ   ಕವಿತೆಯಾಗಿ...!!

Thursday, May 24, 2012

'' ಪ್ರತೀಕ್ಷೆ ''


ಯಮುನೆ ಹರಿಯುತಿದ್ದಾಳೆ 
ನಿಶ್ಯಬ್ದವಾಗಿ, 
ಬಳುಕಿ  ಹರಿಯುವ ಲಾಸ್ಯವಿಲ್ಲ...,
ಕಲರವ ಕೊರಗಾಗಿದೆ.

ದಡದ ಮೇಲಿನ ಕದಂಬ ಮರ 
ಕದಲದೆ ನಿಂತಿದೆ, 
ಸೂಸದೆ ಪರಿಮಳವ 
ಮೋಹನ ಕೊಟ್ಟ ಮಾತಿಗೆ ಸಾಕ್ಷಿಯಾಗಿ,


ಬೆಳದಿಂಗಳು ಮಂಕಾಗಿದೆ 
ಬೇಗೆಯಿಂದ, 
ರಾಧೆಯ ಹೃದಯದಿ ಅರಳಿದ  ಪ್ರೀತಿಗೆ
ಕಾರಣ ನಾನಾದೆನೆಂದು....!  

ಹಣತೆ ಹಚ್ಚಿಟ್ಟು ಕಾಯುತಿಹಳು ರಾಧೆ
ಮೋಹನನಿಗಾಗಿ, 
ಕಣ್ಣೀರ ಹನಿ ಹೊಳೆಯಾಗಿ ಹರಿಸಿ 
ವಿರಹದಿಂದ....,

ಅದೆಷ್ಟೋ ಹುಣ್ಣಿಮೆ ಬಂದವು 
ಕರಗಿ ಹೋದವು ಕಾರಿರುಳಲ್ಲಿ 
ಮುರಳಿ ಮೋಹನ ಮಾತುಕೊಟ್ಟಿದ್ದಾನೆ
 '' ಬಂದೇ ಬರುತ್ತೇನೆಂದು ''
ಯಾರಾದರು ಕಂಡಿರ, ಗೋಪಾಲನ....?
ರಾಧೆ ಈಗಲೂ ಕಾಯುತಿಹಳು 
ನೋಡಿರಲ್ಲಿ....,  ಕದಂಬದ ಮರಕ್ಕೊರಗಿ  ಕುಳಿತಿಹಳು.....!!

Tuesday, May 22, 2012

ಮೇಘ ಸಂದೇಶ......


ದೂರ ದೂರಕೆ ತೇಲಿ ಸಾಗುತಿರುವ ಮೋಡಗಳೇ....,
ನನ್ನ ವಿನಂತಿಯನ್ನೊಮ್ಮೆ ಆಲಿಸಿ ಮುಂದೆ ಸಾಗಲಾರಿರ....?
ತಡೆದು ನಿಲ್ಲಿಸಿದ್ದಕ್ಕೆ ಕ್ಷಮೆಯಿರಲಿ.....,

ನನ್ನವಳು, 
ಬಾನಲ್ಲಿ ಹೊಳೆವ ನಕ್ಷತ್ರವಾಗಿದ್ದಳು 
ಅದೇಕೊ...! ಈ ನಡುವೆ ಮಿನುಗಲು ಮರೆತಂತಿಹಳು 
ಕರಿಮುಗಿಲಲ್ಲಿ  ಮಿಂಚುವ ಮಿಸುನಿಯಂತಿದ್ದಳು 
ಆದರೀಗ  ಕನಸಿಗೂ ಬರಲಾರದಷ್ಟು ಬದಲಾಗಿಹಳು 

ಈ ನನ್ನ ಮನಸನ್ನು ಮರೆತು ಇರುಳಲ್ಲಿ  ಕಳೆ-
ದು ಹೋದ ಬೆಳದಿಂಗಳ ಬಾಲೆ...., ಅವಳು...!
ನನ್ನೀ ದೇಹವೆಂಬ ಕೊರಡು ಇಲ್ಲಿದೆ 
ಹೃದಯ ಮಾತ್ರ ಅವಳಲ್ಲಿದೆ...! 
ಇನ್ನು ಕಾಯುವ ತಾಳ್ಮೆ  ನನಗಿಲ್ಲ...,

ನೀವು ಸಾಗುವ ಹಾದಿಯಲ್ಲಿ ನನ್ನ 
ತಾರೆಯನ್ನೇನಾದರು ಕಂಡರೆ...
ಕನಿಕರಿಸಿ ಅರುಹಿಬಿಡಿ,
'' ಅಲ್ಲಿ ಕನಸೊಂದು ಕಾಯುತಿದೆ ನಿನಗಾಗಿ 
  ನೀ ಇನ್ನೂ   ಕಾಣದಾದರೆ ಅವನ ಸಾವು ನಿನಗಾಗಿ '' 
ಎನ್ನುತ ಮುಂದೆ ಸಾಗಿ ಹೋಗಿ ಬಂಧುಗಳೇ.....





Monday, May 21, 2012

ನನ್ನವಳು....

ಒಮ್ಮೊಮ್ಮೆ ಬೆಳ್ಳಂ ಬೆಳಿಗ್ಗೆ 
ಮಗದೊಮ್ಮೆ  ಇರುಳು ಕವಿದರೆ ಸಾಕು 
ಮುತ್ತುವವು ಮೊಲದ ಹಿಂಡಂತೆ...,
ಹೊಸ ಬಣ್ಣ ಬಳಿದಂತಹ ಕನಸುಗಳು 

ಅವಳ ಕನಸಿಗೆ ನಾನು ಲಗ್ಗೆ-
ಯಿಡುತ್ತೇನೋ ಇಲ್ಲವೋ ಗೊತ್ತಿಲ್ಲ 
ಅವಳು ಮಾತ್ರ ಕಾಡಿಬಿಡುವಳು
ನನ್ನೆಲ್ಲ ಕನಸುಗಳಲ್ಲೂ....!

ಕಣ್ಣರೆಪ್ಪೆಯ ಹಿಂದಿನ ಹಾಡಾಗುವಳು
ಇವಳು...., ನಾ ಬಯಸಿದಾಗಲೆಲ್ಲ 
ಗುನುಗುನುಗಿ ಮಾಯವಾಗುವ
ಜಿಂಕೆಯಂತವಳು...., ನಾ 
ಕಣ್ಣುಬಿಟ್ಟೊಡನೆ ಎದಿರಲ್ಲೇ 
ಹಾಜರಾಗುವಳು.....!

ಮುಂಗುರಳನು ಹಿಂದಕ್ಕೆ ತಳ್ಳಿ 
ಹಣೆಯ ಮೇಲೊಂದು ಹೂ ಮುತ್ತನ್ನಿತ್ತು 
ಬಿಸಿ ಬಿಸಿ ಸುವಾಸನೆಯ ಕಾಫಿ-
ಯೊಂದಿಗೆ ಬೆಳಗಾಗುವಳು 
ಆ ದಿನವೆಲ್ಲ ಬೆಳಕಾಗುವಳು 
ಇವಳು ನನ್ನವಳು....,

Sunday, May 20, 2012

-------ಅರ್ಪಣೆ------


ತನುವನ್ನೇ ಬಸಿದು
ಶೇಖರಿಸಿಟ್ಟ ಮಕರಂದವನು....!

ಬಂದ ದುಂಬಿಯೊಂದು
ಹನಿ ಬಿಡದೆ ಹೀರಿದರೂ....!

ತನ್ನೊಲವು ಅರ್ಪಿತವಾಯ್ತೆಂದು
ಧನ್ಯವಾಯ್ತು
ಹೂ
ಅರ್ಪಣೆಯಲ್ಲಿ...!! 
( ಹಿಂದೊಮ್ಮೆ ಬರೆದಿದ್ದೆ ಅದನ್ನೇ ತಿದ್ದಿ ಬರೆದಿದ್ದೇನೆ.)